ಗದಗ: ‘ಭಾರತೀಯ ಹಬ್ಬಗಳು, ಆಚರಣೆಗಳು ನೆಲಮೂಲ ಸಂಸ್ಕೃತಿ ಪಸರಿಸುತ್ತಾ ಸಾಮರಸ್ಯದೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಮನುಷ್ಯನ ಬದುಕಿಗೆ ಮಣ್ಣೇ ಮೂಲಾಧಾರ ಆಗಿರುವುದರಿಂದ ಮಣ್ಣಿನಿಂದ ವಿವಿಧ ಮೂರ್ತಿಗಳನ್ನು ನಿರ್ಮಿಸುವ ಮೂಲಕ ಆರಾಧನೆ ಮಾಡಲಾಗುತ್ತಿದೆ’ ಎಂದು ಅಧ್ಯಾತ್ಮ ವಿದ್ಯಾಶ್ರಮದ ಶರಣೆ ಮೈತ್ರಾದೇವಿ ತಿಳಿಸಿದರು.
ನವನಗರ ಕ್ಷೇಮಾಭಿವೃದ್ಧಿ ಸಂಘದವರು ಸೀಗೆ ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಬೆಳದಿಂಗಳ ಭೋಜನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭೂಮಿತಾಯಿಯನ್ನು ಆರಾಧಿಸುವ ಮೂಲಕ ಋಣವನ್ನು ತೀರಿಸುವ ಆಶಯದೊಂದಿಗೆ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾ ಬಂದಿದ್ದೇವೆ. ಭಾರತೀಯ ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತಗಳಾಗಿವೆ ಎಂದು ತಿಳಿಸಿದರು.
‘ಭಾರತೀಯ ಸಂಸ್ಕೃತಿ’ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕ್ಷಮಾ ವಸ್ತ್ರದ ಮಾತನಾಡಿ, ‘ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಹೆಣ್ಣುಮಕ್ಕಳ ಮೇಲಿದೆ. ಬಹುತೇಕ ಹಬ್ಬಗಳು ಸ್ತ್ರೀಶಕ್ತಿಯ ಆರಾಧನೆಯಾಗಿದೆ. ಸಂತೋಷ, ಸಡಗರ, ಸಾಮರಸ್ಯವನ್ನು ಇಮ್ಮಡಿಗೊಳಿಸುವುದು ಹಬ್ಬದ ಮೂಲ ಉದ್ದೇಶವಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಸದಸ್ಯ ಎಲ್.ಡಿ.ಚಂದಾವರಿ ಮಾತನಾಡಿ, ‘ನಗರ ಪ್ರದೇಶಗಳು ಇಂದು ನಮ್ಮ ಗ್ರಾಮೀಣ ಸೊಗಡಿನಿಂದ ದೂರ ಸರಿದಿವೆ. ಆದರೆ, ರಾಜೀವ್ಗಾಂಧಿ ನಗರದಲ್ಲಿರುವ ನವನಗರ ಬಡಾವಣೆಯ ನಾಗರಿಕರು ಮೂಲ ಸಂಸ್ಕೃತಿಯನ್ನು ಮರೆಯದೇ ಪ್ರತಿ ವರ್ಷ ವಿವಿಧ ಆಚರಣೆಗಳನ್ನು ಮುಂದುವರಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ’ ಎಂದರು.
ಈ ಸಂದರ್ಭದಲ್ಲಿ ಎಲ್.ಡಿ.ಚಂದಾವರಿ, ನಗರಸಭೆ ಎಂಜಿನಿಯರ್ ಬಂಡಿವಡ್ಡರ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಿ.ಬಿ.ಹೊಳಗುಂದಿ, ಜಗದೀಶ ಪೂಜಾರ, ವಿಶ್ವನಾಥ ಕಮ್ಮಾರ, ಲಾವಣ್ಯ ಬ್ಯಾಗೋಟಿ ಅವರನ್ನು ಸನ್ಮಾನಿಸಲಾಯಿತು.
ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಸ್.ತಳವಾರ ಸ್ವಾಗತಿಸಿದರು. ಎಂ.ಪಿ.ಕಲ್ಮಠ ವಂದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಪಿ.ಡಿ.ಕನ್ಯಾಳ, ಉಮೇಶ ದಲಭಂಜನ, ಪಿ.ಬಿ.ಹೊಂಬಾಳಿಮಠ, ವೀಣಾ ಸೋನಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ನಡೆದ ಬೆಳದಿಂಗಳ ಊಟದಲ್ಲಿ ಬಡಾವಣೆಯ ನೂರಾರು ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.