
ಶಿರಹಟ್ಟಿ: ‘ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಭಕ್ತ ಕನಕದಾಸರ ದಾರ್ಶನಿಕತೆ ಕೇವಲ ಜಯಂತಿಗೆ ಸೀಮಿತವಾಗಬಾರದು’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಹಾಗೂ ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ದಾರ್ಶನಿಕ ಸಂತ ಕನಕದಾಸರು ಕನ್ನಡ ಸಾಹಿತ್ಯ ಪರಂಪರೆಯ ಅಗ್ರಗಣ್ಯ ಧಾರ್ಮಿಕ ಸಾಹಿತ್ಯ ನಾಯಕರು. ಮಾನವೀಯ ಮೌಲ್ಯ, ಜಾತಿ ಪದ್ಧತಿ ತಿರಸ್ಕಾರ, ಸೌಹಾರ್ದ ಹಾಗೂ ಸಮಾನತೆ ನೆಲೆಗಟ್ಟಿನ ಮೇಲೆ ಸಮನ್ವಯ ಸಮಾಜ ಕಟ್ಟಲು ಶ್ರಮಿಸಿದ ಕನಕದಾಸರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದರು.
ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ‘ದಾಸ ಶ್ರೇಷ್ಠ ಕನಕದಾಸರ ಜೀವನವೇ ಒಂದು ವಿಶಿಷ್ಟ ಯಶೋಗಾಥೆ. ದಂಡನಾಯಕನಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತ ಆಧ್ಯಾತ್ಮಿಕ ಲೋಕದ ಕಡೆಗೆ ತಿರುಗಿ, ಶ್ರೇಷ್ಠ ದಾಸ ಸಾಹಿತಿಯಾದವರು’ ಎಂದರು.
ಕನಕದಾಸ ವೃತ್ತದಿಂದ ಕನಕದಾಸರ ಚಿತ್ರ ಮೆರವಣಿಗೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಕನಕದಾಸರ ವೇಷಭೂಷಣದಲ್ಲಿ ಕಂಗೊಳಿಸಿದರು.
ಈ ವೇಳೆ ಬಿಇಒ ಎಚ್. ನಾಣಕಿ ನಾಯಕ್, ಶಿವಪ್ಪ ಹದ್ಲಿ, ಎಚ್.ಎಂ. ದೇವಗಿರಿ, ಹೊನ್ನೇಶ ಪೊಟಿ, ಎಂ.ಕೆ. ಲಮಾಣಿ, ದೇವಪ್ಪ ಬಟ್ಟೂರ, ಸುರೇಶ ತಳ್ಳಳ್ಳಿ, ಹೇಮಂತ ಕೆಂಗೊಂಡ, ರಾಮಣ್ಣ ಕಂಬಳಿ, ದೀಪು ಕಪ್ಪತ್ತನವರ, ಮಂಜುನಾಥ ಘಂಟಿ, ಹೊನ್ನಪ್ಪ ಶಿರಹಟ್ಟಿ, ಆನಂದ ಮಾಳೆಕೊಪ್ಪ, ಹನುಮಂತ ಗೊಜನೂರ, ನಂದಾ ಪಲ್ಲೇದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.