ಡಂಬಳ: ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆ ಸುರಿದಿದೆ. ಶನಿವಾರ ಸಹ ಹಲವು ಗ್ರಾಮದಲ್ಲಿ ಮಳೆ ಆಗಿದ್ದು, ಡಂಬಳದಲ್ಲಿ ಜೋರಾಗಿ ಮಳೆ ಆಗಿದೆ. ಮಳೆ ಪರಿಣಾಮ ಕೃಷಿ ಚಟುವಟಿಕೆಗೆ ಹೋಗಿದ್ದ ಕೂಲಿ ಕಾರ್ಮಿಕರು ಹಾಗೂ ರೈತರು ವಾಪಸ್ ಮನಗೆ ಬಂದರು.
ಶನಿವಾರ ಸುರಿದ ಜೋರಾದ ಮಳೆಯಲ್ಲಿ ಪುಟಾಣಿ ಮಕ್ಕಳು ಸಂಭ್ರಮಿಸಿದರು. ಬಹುತೇಕ ಕಡೆ ಮಳೆಯಲ್ಲೆ ಛತ್ರಿಯ ರಕ್ಷಣೆಯನ್ನು ಸಾರ್ವಜನಿಕರು ಪಡೆದುಕೊಂಡು ಹೋದರು. ಡಂಬಳ ಕೇಂದ್ರ ಸ್ಥಾನ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ಮೂರು ವಾರದಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ರೈತರ ಜಮೀನುಗಳಲ್ಲಿ ಬೆಳೆ ಸಮೃದ್ಧವಾಗಿ ಬೆಳೆದಿವೆ.
ಅತಿಯಾದ ತಂಪಿನಿಂದಾಗಿ ಈರುಳ್ಳಿ, ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ವಿವಿಧ ರೋಗದಿಂದ ಬಳಲುವಂತಾಗಿದೆ. ಜಿಟಿ ಜಿಟಿ ಮಳೆ ಆಗುವ ಮೋಡ ಕವಿದ ವಾತಾವರಣ ಮುಂದುವರೆದಿದೆ. ತೇವಾಂಶ ಹೆಚ್ಚಳದಿಂದ ಹಾಗೂ ಹವಮಾನ ಬದಲಾವಣೆಯಿಂದ ಚಿಕ್ಕಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ ಇತರೆ ಕಾಯಲೆಗಳು ಸಾಮಾನ್ಯವಾಗಿವೆ.
ರೈತರ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಹಾಗೂ ರೈತರು ಮಳೆಯ ಪರಿಣಾಮ ವಾಪಸ್ ಬಂದರು. ನಿರಂತವಾಗಿ ಮಳೆ ಸುರಿದರೆ ಈರುಳ್ಳಿ ಹಾಗೂ ಮೆಕ್ಕೆಜೋಳದಲ್ಲಿ ಹೆಚ್ಚು ಕಸ ಬೆಳೆಯುವ ಸಾಧ್ಯತೆ ಇದೆ. ಬೆಳೆಗಳು ಸಮೃದ್ಧವಾಗಿ ಬೆಳೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.