ಗಜೇಂದ್ರಗಡ: ಕಳೆದ 8-10 ದಿನಗಳಿಂದ ಸುರಿದ ಉತ್ತಮ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ರೈತರು ಕೃಷಿ ಚಟುವಟಿಕೆಗೆ ಅಣಿಯಾಗುತ್ತಿದ್ದಾರೆ.
ರೋಹಿಣಿ ಮಳೆಗೆ ಬಿತ್ತನೆ ಮಾಡಿದರೆ ಕೀಟ ಬಾಧೆ ಕಡಿಮೆ ಎಂಬ ನಂಬಿಕೆ ಹೊಂದಿರುವ ರೈತರು ಕಪ್ಪು (ಎರಿ) ಹಾಗೂ ಕೆಂಪು (ಮಸಾರಿ) ಭೂಮಿಯಲ್ಲಿ ಹೆಸರು, ಹೈಬ್ರಿಡ್ ಜೋಳ ಬಿತ್ತನೆ ಮಾಡುತ್ತಾರೆ. ಅಲ್ಲದೆ ಕೆಂಪು (ಮಸಾರಿ) ಭೂಮಿಯಲ್ಲಿ ಗೋವಿನ ಜೋಳ, ಸಜ್ಜೆ, ತೊಗರಿ ತಡವಾಗಿ ಬಿತ್ತನೆ ಮಾಡುತ್ತಾರೆ. ತಾಲ್ಲೂಕಿನಾದ್ಯಂತ ಕೃತಿಕಾ ಮಳೆ ಉತ್ತಮವಾಗಿ ಸುರಿದಿದ್ದರಿಂದ ಭೂಮಿ ಸಂಪೂರ್ಣ ಹಸಿಯಾಗಿದೆ. ಮಳೆ ಬಿಡುವು ನೀಡಿ, ಬಿಸಿಲಿನ ಪ್ರಖರತೆ ಹೆಚ್ಚಿ ಭೂಮಿ ಸ್ವಲ್ಪ ಹದಕ್ಕೆ ಬಂದರೆ ಬಿತ್ತನೆ ಮಾಡಲು ರೈತರು ಈಗಾಗಲೇ ಮಾರುಕಟ್ಟೆಯಲ್ಲಿ ಬೀಜ, ರಸ ಗೊಬ್ಬರ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.
‘ಪ್ರತಿ ವರ್ಷ ಸಕಾಲದಲ್ಲಿ ಕೃತಿಕಾ, ರೋಹಿಣಿ ಮಳೆ ಸುರಿಯದ ಕಾರಣ ರೋಹಿಣಿ ತತಿಗೆ ಬಿತ್ತನೆ ಮಾಡಲು ಆಗುತ್ತಿರಲಿಲ್ಲ. ಈ ಬಾರಿ ಸೈಕ್ಲೋನ್ನಿಂದಾಗಿ ಕೃತಿಕಾ ಮಳೆ ಉತ್ತಮವಾಗಿ ಸುರಿದಿದೆ. ಹೀಗಾಗಿ ಭೂಮಿ ಸ್ವಲ್ಪ ಹದಕ್ಕೆ ಬಂದರೆ ಬಿತ್ತನೆ ಮಾಡಲು ಈಗಾಗಲೇ ಬೀಜ ಗೊಬ್ಬರ ತಂದಿಟ್ಟುಕೊಂಡಿದ್ದೇವೆ. ಈ ಬಾರಿ ಉತ್ತಮ ಮಳೆ, ಬೆಳೆ ನಿರೀಕ್ಷೆ ಹೊಂದಿದ್ದೇವೆʼ ಎಂದು ರೈತರಾದ ಅಂದಪ್ಪ ಅಂಗಡಿ, ಯಲ್ಲಪ್ಪ ಶಂಕ್ರಿ ಹೇಳಿದರು.
‘ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 44 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ 6 ಸಾವಿರ ಹೆಕ್ಟೇರ್ ಕೆಂಪು ಭೂಮಿ ಹಾಗೂ 38 ಸಾವಿರ ಹೆಕ್ಟೇರ್ ಕಪ್ಪು ಭೂಮಿಯಿದೆ. ಈಗಾಗಲೇ ರೋಹಿಣಿ ಮಳೆ ಆರಂಭವಾಗಿರುವುದರಿಂದ ಹೆಸರು ಬಿತ್ತನೆ ಮಾಡುವ ರೈತರು ಮನೆಯಲ್ಲಿನ ಬೀಜಗಳಿಗೆ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೆಳೆಗೆ ಹಳದಿ ರೋಗ ಬರುವುದಿಲ್ಲ. ಈಗಾಗಲೇ ಗಜೇಂದ್ರಗಡ ರೈತ ಸಂಪರ್ಕ ಮಾರಾಟ ಮಳಿಗೆಯಲ್ಲಿ ಸದ್ಯಕ್ಕೆ 23 ಕ್ವಿಂಟಲ್ ಹೆಸರು, 100 ಕ್ವಿಂಟಲ್ ಗೋವಿನ ಜೋಳ ಬೀಜಗಳ ದಾಸ್ತಾನಿದೆʼ ಎಂದು ಸಹಾಯಕ ಕೃಷಿ ಅಧಿಕಾರಿ ಸಿ.ಕೆ. ಕಮ್ಮಾರ ಮಾಹಿತಿ ನೀಡಿದರು.
ಗೋವಿನ ಜೋಳದ ಬೆಳೆಗೆ ಗಂಧಕದ ಅವಶ್ಯಕತೆ ಇದೆ. ಹೀಗಾಗಿ ಇದನ್ನು ಬಿತ್ತನೆ ಮಾಡುವ ರೈತರು ಕೇವಲ ಡಿಎಪಿಗೆ ದುಂಬಾಲು ಬಿಳದೇ 20-20-0-5 19-19-0-5 12-32-16 ರಸಗೊಬ್ಬರ ಬಳಕೆ ಮಾಡಿದರೆ ಉತ್ತಮಸಿ.ಕೆ.ಕಮ್ಮಾರ ಸಹಾಯಕ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ನರೇಗಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.