ADVERTISEMENT

ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ರಾಣಿ ಚನ್ನಮ್ಮ

ಕಿತ್ತೂರು ರಾಣಿ ಚನ್ನಮ್ಮ ಜಯಂತಿ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:02 IST
Last Updated 24 ಅಕ್ಟೋಬರ್ 2025, 5:02 IST
ಗದಗ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಆಚರಿಸಲಾಯಿತು 
ಗದಗ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಆಚರಿಸಲಾಯಿತು    

ಗದಗ: ‘ವೀರರಾಣಿ ಕಿತ್ತೂರು ಚನ್ನಮ್ಮ ಸ್ವಾಭಿಮಾನದ ಪ್ರತೀಕ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರೊಂದಿಗೆ ಧೈರ್ಯ, ಶೌರ್ಯದಿಂದ ಹೋರಾಡಿದ ವೀರಮಾತೆ’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

‘1824ರಲ್ಲಿ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ರಾಣಿ ಚನ್ನಮ್ಮ ಅವರ ಧೈರ್ಯ, ಸಾಹಸ ಎಲ್ಲರಿಗೂ ಮಾದರಿ’ ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ‘ಕಿತ್ತೂರ ಚನ್ನಮ್ಮ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಶೌರ್ಯ, ಮಾನವೀಯ ಮೌಲ್ಯಗಳ ಕುರಿತು ಈಗಿನ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಮಕ್ಕಳಿಗೆ ಆತ್ಮಸ್ಥೈರ್ಯ ವೃದ್ಧಿಸಲು ಕರಾಟೆ, ಕುಸ್ತಿಗಳಂತಹ ಸ್ವಯಂ ರಕ್ಷಣಾ ಕಲೆಗಳನ್ನು ಕಲಿಸಬೇಕು’ ಎಂದರು.

ಈ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳು ಹಾಗೂ ಸಮಾಜಸೇವಕರನ್ನು ಸನ್ಮಾನಿಸಲಾಯಿತು.

ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಹಾಗೂ ಬಸವರಾಜ ಹಡಗಲಿ ತಂಡದವರು ವೀರರಾಣಿ ಕಿತ್ತೂರ ಚನ್ನಮ್ಮ ಕುರಿತು ಜನಪದ ಗೀತೆ ಪ್ರಸ್ತುತಪಡಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ಡಿಡಿಪಿಐ ಆರ್.ಎಸ್. ಬುರುಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಈರಣ್ಣ ಕರಿಭೀಷ್ಟಿ, ಎಫ್. ಮರಿಗೌಡ್ರ, ಶರಣಪ್ಪ ಗುಡಿಮನಿ, ಬಸಣ್ಣಪ್ಪ ಚಿಂಚಲಿ, ಅಯ್ಯಪ್ಪ ಅಂಗಡಿ, ಅಜ್ಜಣ್ಣ ಹಿರೇಮನಿ ಪಾಟೀಲ, ಶಿವು ಕವಲೂರು, ಮಹಾಬಲೇಶ ಶೆಟ್ಟರ, ರವಿ ಪಾಟೀಲ, ಮುರುಗೇಶ ಹಡಗಲಿ, ಪಶಾಂತ ನರೇಗಲ್‌, ಪರಪ್ಪ ಕಮತರ, ಚಿನ್ನೂರ, ಚನ್ನವೀರಪ್ಪ ಮಳಗಿ, ಮಹೇಶ ಕರಿಬಿಷ್ಠಿ, ವಿರುಪಾಕ್ಷಪ್ಪ ಮಟ್ಟಿ, ಸ್ವಾತಿ ಅಕ್ಕಿ, ಈರಮ್ಮ ತಾಳಿಕೋಟಿ ಜಯಶ್ರೀ ಉಗಲಾಟದ, ಜಯಶ್ರೀ ಅಣ್ಣಿಗೇರಿ ಇದ್ದರು. 

Highlights -

Quote - ರಾಣಿ ಚನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸದ ವಿಷಯ. ಚನ್ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಥಮ ಮಹಿಳಾ ಹೋರಾಟಗಾರ್ತಿ. ಅವರ ಶೌರ್ಯ ತ್ಯಾಗ ಮಹಿಳೆಯರಿಗೆ ಪ್ರೇರಣೆ ವಿಜಯಕುಮಾರ ಗಡ್ಡಿ ಬಿಜೆಪಿ ಮುಖಂಡ

Quote - ವೀರರಾಣಿ ಕಿತ್ತೂರು ಚನ್ನಮ್ಮ ದೇಶಭಕ್ತಿಯ ಸಂಕೇತ. ಭವ್ಯ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪಸರಿಸಿದ ಕೀರ್ತಿ ವೀರರಾಣಿ ಚನ್ನಮ್ಮ ಅವರಿಗೆ ಸಲ್ಲುತ್ತದೆ ಬಿ.ಬಿ.ಅಸೂಟಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ

Cut-off box - ‘ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದ ಚನ್ನಮ್ಮ’ ‘ಕಿತ್ತೂರು ಸಂಸ್ಥಾನದ ರಕ್ಷಣೆಗೆ ಹೋರಾಡಿದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಥಮವಾಗಿ ನಾಂದಿ ಹಾಡಿದವರು ರಾಣಿ ಚನ್ನಮ್ಮ. ಇದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ’ ಎಂದು ಅಗಡಿ ಎಂಜಿನಿಯರಿಂಗ್‌ ಮಹಾವಿದ್ಯಾಲಯದ ಪ್ರೊ. ಸೋಮಶೇಖರ ಕೆರಿಮನಿ ತಿಳಿಸಿದರು.  ‘ಭವ್ಯ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯದ ಹೊಸ ಕಲ್ಪನೆ ನೀಡಿದ ಪುಣ್ಯಭೂಮಿ ಕಿತ್ತೂರು ಸಂಸ್ಥಾನ. ‘ಸತ್ತರೆ ವೀರ ಸ್ವರ್ಗ ಉಳಿದರೆ ಕಿತ್ತೂರು ನೆಲ’ ಎಂದ ರಾಣಿ ಚನ್ನಮ್ಮ ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದರು’ ಎಂದರು. ‘1824ರಲ್ಲಿ ಬ್ರಿಟಿಷರು ಕಿತ್ತೂರು ಸಾಮ್ರಾಜ್ಯಕ್ಕೆ ಆಕ್ರಮಣ ಮಾಡಲು ಬಂದಾಗ ತನ್ನ ರಾಜಕೀಯ ಚಾಣಾಕ್ಷತೆ ಶೌರ್ಯದಿಂದ ನಾಡಿನ ರಕ್ಷಣೆಗಾಗಿ ಹೋರಾಡಿದರು. ಹೆಣ್ಣು ಅಬಲೆಯಲ್ಲ ಸಬಲೆ. ಅವಳು ಮನಸ್ಸು ಮಾಡಿದರೆ ಹೊಸ ಇತಿಹಾಸಕ್ಕೆ ನಾಂದಿ ಹಾಡಬಲ್ಲಳು ಎನ್ನುವುದನ್ನು ಅವರಿಂದ ಕಲಿಯಬೇಕು’ ಎಂದರು. ‘ವೀರರಾಣಿ ಕಿತ್ತೂರು ಚನ್ನಮ್ಮ ಅವರ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರು ಅಜರಾಮರವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.