
ಶಿರಹಟ್ಟಿ: ‘ಶಿರಹಟ್ಟಿ ಕ್ಷೇತ್ರದ ಶಾಸಕರು ಬದಲಾವಣೆ ಆಗಬೇಕು. ಅಲ್ಲೀವರೆಗೆ ನಾನು ಹೋರಾಟ ಕೈಬಿಡುವುದಿಲ್ಲ’ ಎಂದು ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಹೇಳಿದರು.
‘ಶಾಸಕರಿಗೆ ನಾನೇ ಸರ್ವಶ್ರೇಷ್ಠ ಎಂಬ ಅಹಂಕಾರ ಬಂದಿದೆ. ಸಮಾಜದ ಸ್ವಾಮೀಜಿ ಎನ್ನುವುದನ್ನು ಲೆಕ್ಕಿಸದೇ ನನ್ನ ವಿರುದ್ಧ ಅಪಪ್ರಚಾರ, ಧಮ್ಕಿ, ಪುಡಾರಿಗಳಿಂದ ಹೊಡೆಸುವ ಬೆದರಿಕೆ ಹಾಕುವ ಕೆಲಸ ಮಾಡಿದರು. ಅದಕ್ಕೂ ಜಗ್ಗದಿದ್ದಾಗ ಮಠ ಬಿಟ್ಟು ಓಡಿಸುವ ವ್ಯರ್ಥ ಪ್ರಯತ್ನ ಮಾಡಿದ್ರು. ಆದರೆ ಮಠದ ಭಕ್ತರು ಸದಾ ನನ್ನೊಂದಿಗೆ ಇದ್ದಿದ್ದರಿಂದ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಾಸಕ ಡಾ. ಚಂದ್ರು ಲಮಾಣಿ ಅವರು ನನ್ನ ವಿರುದ್ಧ ಷಡ್ಯಂತ್ರ ನಡೆಸಿ, ಗವಿಮಠ ಬಿಡಿಸುವ ಹುನ್ನಾರ ಮಾಡಿದ್ದರು. ಆ ಸಿಟ್ಟಿನಿಂದ ಶಾಸಕರ ವಿರುದ್ಧ ಮಾತನಾಡಿರುವುದು ನಿಜ. ಎರಡು ದಿನಗಳಿಂದ ಸಂಚಲನ ಮೂಡಿಸಿದ್ದ ವೈರಲ್ ಆಡಿಯೋ ನನ್ನದೇ. ಆದರೆ, ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದರು.
‘ಶಾಸಕರಿಗೆ ಟಿಕೆಟ್ ತಪ್ಪಿಸಬೇಕು, ಬೆಂಗಳೂರಿನಲ್ಲಿ ಸೂತ್ರ ಹೆಣೆಯಲಾಗಿದೆ, ಶಾಸಕರು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ, ರಸ್ತೆ ಗುಂಡಿಗಳಾಗಿವೆ, ಒಂದೆಡೆ ಸೇರಿ ಯೋಜನೆ ರೂಪಿಸೋಣ ಎಂಬುದರ ಕುರಿತು ಮಾತನಾಡಿರುವುದು ಸತ್ಯ. ಅದನ್ನು ಸಮರ್ಥಿಸಿಕೊಳ್ಳುತ್ತೇನೆ. ಆ ವಾಯ್ಸ್ ಕರೆ ನಮ್ಮದೇಯಾಗಿದ್ದು, ನಾನು ಮಾತನಾಡಿರುವ ವ್ಯಕ್ತಿ ಒಂದು ಪಕ್ಷದ ಮುಖಂಡರು ಮತ್ತು ಪಂಚಮಸಾಲಿ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಆ ಆಡಿಯೊ ಸಂಭಾಷಣೆ ಆರು ತಿಂಗಳು ಹಿಂದಿನದ್ದು’ ಎಂದು ತಿಳಿಸಿದರು.
‘ನಾಲ್ಕು ತಿಂಗಳ ಹಿಂದೆ ಅವರ ಕಡೆಯವರೇ ಆದ ಸೋನು ಲಮಾಣಿ ಕರೆ ಮಾಡಿ, ನೀವು ಶಾಸಕರೊಂದಿಗೆ ಒಂದಾಗಬೇಕು. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದು ಹೇಳಿರುವ ಆಡಿಯೊ ನನ್ನ ಬಳಿಯಿದೆ. ನಂತರ ಅಂದು ಶಾಸಕರು ನನ್ನ ವಿರುದ್ಧ ಪಿತೂರಿ ಮಾಡಿ ಊರ ಗೌಡರಿಗೆ ₹20 ಲಕ್ಷ ಹಣ ಕೊಟ್ಟು ಮಠ ಬಿಡಿಸಲು ಷಡ್ಯಂತ್ರ ನಡೆಸಿದ್ದರು. ಹಾಗಾಗಿ ನಾನು ಮನನೊಂದು ಸಿಟ್ಟಿನಿಂದ ಅಂದು ಮಾತನಾಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.