
ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ಆವರಣದಲ್ಲಿನ ಗೋಡೌನ್ಗಳ ಎದುರು ಮೆಕ್ಕೆಜೋಳ ಮಾರಾಟಕ್ಕೆ ರೈತರು ಭಾನುವಾರ ಮಧ್ಯರಾತ್ರಿಯಿಂದ ಚಳಿಯಲ್ಲೇ ಸರದಿ ಸಾಲಿನಲ್ಲಿ ಕಾದು ಕುಳಿತಿದ್ದರು.
ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಈಗಾಗಲೇ ಆರಂಭವಾಗಿದೆ. ಮೊದಲು ನೋಂದಣಿ ಮಾಡಿಸಿರುವ ರೈತರು ಸೋಮವಾರ ಮೆಕ್ಕೆಜೋಳ ತರಲು ಅಧಿಕಾರಿಗಳು ತಿಳಿಸಿದ್ದರು. ಅದರಂತೆ ರೈತರು ಭಾನುವಾರ ಮಧ್ಯ ರಾತ್ರಿಯೇ ಬಂದು ಕಾಯುತ್ತಿದ್ದರು.
ಆದರೆ ಸೋಮವಾರ ಮಧ್ಯಾಹ್ನ 12 ಗಂಟೆ ಆದರೂ ಅಧಿಕಾರಿಗಳು ಮೆಕ್ಕೆಜೋಳ ತೆಗೆದುಕೊಳ್ಳಲು ಮುಂದಾಗಲಿಲ್ಲ. ಇದರಿಂದಾಗಿ ಕೆಲ ರೈತರು ಆಕ್ರೋಶಗೊಂಡಿದ್ದರು. ನಂತರ ಅಧಿಕಾರಿಗಳು ಎರಡ್ಮೂರು ದಿನಗಳಿಂದ ಖರೀದಿಸಿದ ಮೆಕ್ಕೆಜೋಳವನ್ನು ಜಿಲ್ಲಾ ಕೇಂದ್ರಕ್ಕೆ ಸಾಗಿಸಿದ ನಂತರ ಖರೀದಿಗೆ ಮುಂದಾದರು.
‘ನಾವು ಭಾನುವಾರ ರಾತ್ರಿಯೇ ಬಂದೇವಿ. ಆದರ ಸೋಮವಾರ ಮಧ್ಯಾಹ್ನ ಆದರೂ ಇನ್ನೂ ಗ್ವಾನಜ್ವಾಳ ತಗೊಂಡಿಲ್ರೀ’ ಎಂದು ಗೊಜನೂರು ಗ್ರಾಮದ ರೈತರು ಅಳಲು ತೋಡಿಕೊಂಡರು.
‘ರೈತರಿಗೆ ತೊಂದರೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಗೋವಿನಜೋಳ ಖರೀದಿಸಬೇಕು’ ಎಂದು ಭಾರತೀಯ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.