
ಗದಗ: ‘ಬೆಳಗಾವಿಯ ಚಳಿಗಾಲದ ಅಧಿವೇಶನದ ಕಲಾಪಗಳಲ್ಲಿ ಚರ್ಚೆಗಳು ನಡೆಯುತ್ತಿದ್ದರೂ ಅದರಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ನಯಾಪೈಸೆ ಪ್ರಯೋಜನ ಆಗಿಲ್ಲ. ಉತ್ತರ ಕರ್ನಾಟಕದವರನ್ನು ವಲಸಿಗರಂತೆ ನೋಡುವ ಮನೋಭಾವ ದೂರಾಗಬೇಕು’ ಎಂದು ಬಿಜೆಪಿ ಮುಖಂಡ ಶರಣ್ ಪಾಟೀಲ ಹೇಳಿದ್ದಾರೆ.
‘ಸದ್ಯ ಪ್ರಾರಂಭವಾಗಿರುವ ಕಲಾಪದಲ್ಲಿ ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ಮೀಸಲಿಡುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಪ್ರತಿವರ್ಷ ಇದೇ ರೀತಿ ಕಲಾಪದಲ್ಲಿ ಚರ್ಚೆಯ ವ್ಯರ್ಥಾಲಾಪ ನಡೆದಿದೆ ವಿನಃ; ಉತ್ತರ ಕರ್ನಾಟಕದ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿ ಉಳಿದಿದೆ’ ಎಂದು ಟೀಕಿಸಿದ್ದಾರೆ.
‘ಚರ್ಚೆಗಳು ಕೆಲಸಗಳಾಗಿ ಬದಲಾಗದ ಹೊರತು ಅವುಗಳಿಗೆ ಅರ್ಥ ಬರುವುದಿಲ್ಲ. ಉತ್ತರ ಕರ್ನಾಟಕದ ಜನರಿಗೆ ನಿಜವಾಗಿಯೂ ನ್ಯಾಯ ಕೊಡಿಸಲು ಎಲ್ಲರೂ ಪಕ್ಷ, ಸಿದ್ಧಾಂತ ಮರೆತು ಒಂದಾಗಬೇಕು. ಇಲ್ಲದಿದ್ದರೆ ರಾಜಕೀಯ ನಿರ್ಲಕ್ಷ್ಯ ಉತ್ತರ ಕರ್ನಾಟಕ ಭಾಗದ ಜನರ ಜನಾಂದೋಲನಕ್ಕೆ ಕಾರಣವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.