ಲಕ್ಷ್ಮೇಶ್ವರ: ಫಸಲ್ಭಿಮಾ ಯೋಜನೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಅಲ್ಲದೆ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೋಮವಾರ ಲಕ್ಷ್ಮೇಶ್ವರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಅಧ್ಯಕ್ಷ ನಾಗೇಶ ಅಮರಾಪುರ ಅವರ ನೇತೃತ್ವದಲ್ಲಿ ಕಾರ್ಯಕರ್ತರು ತಹಶೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನಾಗೇಶ, ‘ಅತಿವೃಷ್ಟಿ, ಅನಾವೃಷ್ಟಿಯಂತ ಸಂದರ್ಭಗಳಲ್ಲಿ ರೈತರ ಕೈ ಹಿಡಿಯಬೇಕಾಗಿದ್ದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸಂಪೂರ್ಣ ಏಜೆಂಟರ ಕೈಯಲ್ಲಿದೆ. ಶೇ50ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಿದೆ. ಆದರೆ ಪರಿಹಾರ ನೀಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಹಾಗೂ ವಿಮಾ ಷರತ್ತುಗಳಲ್ಲಿ ಲೋಪವಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈತರು ಸಂತ್ರಸ್ತರಾಗಿದ್ದಾರೆ’ ಎಂದರು.
‘ಬ್ಯಾಂಕುಗಳು ರೈತರಿಗೆ ತಾವು ನೀಡಿದ ಸಾಲದಲ್ಲಿ ಕಂತು ಕಡಿತ ಮಾಡಿಕೊಂಡೇ ಸಾಲದ ಮೊತ್ತ ನೀಡುತ್ತಿವೆ. ಇದರಿಂದಾಗಿ ರೈತರು ಈ ಯೋಜನೆ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಏಜೆಂಟರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ವಿಮಾ ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಮಗೆ ಬೇಕಾದ ಬೆಳೆಯನ್ನು ದೃಢೀಕರಣ ಮಾಡಿ ರೈತರಿಗೆ ವಿಮೆಯ ಅರ್ಧ ಹಣ ಹಾಗೂ ಏಜೆಂಟರಿಗೆ ಅರ್ಧ ಹಣ ಬರುವಂತೆ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಬೆಳೆ ವಿಮೆ ಜಮೆಯಾದ ರೈತರು ಏಜೆಂಟರಿಗೂ ದುಡ್ಡು ಕೊಡುವ ಅವಶ್ಯಕತೆ ಇಲ್ಲ. ಇದು ರೈತರಿಗೆ ಸೇರಬೇಕಾದ ಹಣ’ ಎಂದರು.
‘ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಫಸಲ್ಭಿಮಾ ಯೋಜನೆಯ ಏಜೆಂಟರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಯೋಜನೆಯಲ್ಲಿ ನಡೆದಿರುವ ಅವ್ಯವಹಾರವನ್ನು ಲೋಕಾಯುಕ್ತರ ತನಿಖೆಗೆ ಒಳಪಡಿಸಬೇಕು. ಎಂದು ಒತ್ತಾಯಿಸಿದರು.
ಈ ಕುರಿತು ಶೀಘ್ರ ಕ್ರಮಕೈಗೊಳ್ಳದಿದ್ದರೆ ಸಂಘಟನೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕೈಸರ್ ಮಹಮ್ಮದ್ಲಿ, ಆಸೀಫ್ ಮುಳಗುಂದ, ಗೌಸ್ ಜಮಖಂಡಿ, ಜುಬೇರ್ ಮುಲ್ಲಾ, ಯಲ್ಲಪ್ಪ ಹಂಜಗಿ, ಗೌಸ್ ಸವಣೂರ, ಶರಣಪ್ಪ ಬಸಾಪುರ, ಶರೀಫ್ ಮಲ್ಲಾಪುರ, ಬಸವರಜ ಅಮರಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.