ADVERTISEMENT

ಗದಗ | ಹಿಂದೂ ದೇವರ ಅವಹೇಳನ ಆರೋಪ: ಥಳಿತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 15:53 IST
Last Updated 12 ಜುಲೈ 2021, 15:53 IST
ಹಿಂದೂ ದೇವರ ಅವಹೇಳನ ಆರೋಪ: ಥಳಿತ
ಹಿಂದೂ ದೇವರ ಅವಹೇಳನ ಆರೋಪ: ಥಳಿತ   

ಗದಗ: ವಾಮಾಚಾರ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಬಾಬಾ ಆಸಿಫ್‌ ಮೊಹಿಯುದ್ದೀನ್‌ ಜಾಗೀರ್‌ದಾರ (28) ಎಂಬುವರಿಗೆ ಜನರು ಥಳಿಸಿದ ಘಟನೆ ಸೋಮವಾರ ನಗರದ ಎಸ್‌.ಎಂ.ಕೃಷ್ಣನಗರದ ಆಶ್ರಯ ಕಾಲೊನಿಯಲ್ಲಿ ನಡೆದಿದೆ.

ಹಲವು ವರ್ಷಗಳಿಂದ ಗದಗ ನಗರದಲ್ಲಿರುವ ಹೆಂಡತಿ ಮನೆಯಲ್ಲಿಯೇ ತಂಗಿದ್ದ ಇವರು ಮೂಲತಃ ವಿಜಯಪುರದವರು ಎನ್ನಲಾಗಿದೆ.

ಶಿವಾನಂದ ಕುರಿ ಎಂಬುವವರು ತನ್ನ ಚಿಕ್ಕಪ್ಪನಿಗೆ ವಿಪರೀತ ಕೈ ನೋವು ಇದ್ದಿದ್ದರಿಂದ ಬಾಬಾ ಆಸಿಫ್‌ ಜಾಗೀರ್‌ದಾರ ಅವರ ಬಳಿಗೆ ಬಂದು ಕಷ್ಟ ಹೇಳಿಕೊಂಡಿದ್ದರು. ಆಗ ಅವರು ವಿವಿಧ ರೀತಿಯ ಪೂಜೆಗಳನ್ನು ಮಾಡಿಸಿದ್ದರು.

ADVERTISEMENT

‘ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ನೋವು ಕಡಿಮೆ ಆಗುತ್ತಿಲ್ಲ ಏಕೆ’ ಎಂದು ಬಾಬಾರನ್ನು ಶಿವಾನಂದ ಕುರಿ ಪ್ರಶ್ನಿಸಿದ್ದಾರೆ. ಆಗ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಾಬಾ ಆಸಿಫ್‌ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ರೊಚ್ಚಿಗೆದ್ದ ಜನರು ಬಾಬಾಗೆ ಹಿಡಿದು ಥಳಿಸಿದ್ದಾರೆ.

‘ಶಿವಾನಂದ ಕುರಿ ನೀಡಿದ ದೂರಿನಂತೆ ಬಾಬಾ ಆಸಿಫ್‌ ಜಾಗೀರ್‌ದಾರ ಅವರನ್ನು ಬಂಧಿಸಲಾಗಿದೆ. ವಿನಾಕಾರಣ ಹಿಡಿದು ಥಳಿಸಿದ್ದಾರೆ ಎಂದು ಆರೋಪಿಸಿ ಬಾಬಾ ಕಡೆಯವರೂ ಪ್ರತಿದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಗದಗ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.