ಕಾಶೀನಾಥ ಬಿಳಿಮಗ್ಗದ
ಮುಂಡರಗಿ: ದೆಹಲಿಯಲ್ಲಿ ಈಚೆಗೆ ಲೋಕಾರ್ಪಣೆಗೊಂಡ ನೂತನ ಸಂಸತ್ ಭವನದ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್ ಅಂಗಡಿ (ತಿಗರಿ) ಎಂಬ ವಿನ್ಯಾಸಕಾರರದ್ದು ಮಹತ್ವದ ಪಾತ್ರವಿದೆ.
ಸಂಸತ್ ಭವನದ ಒಳಾಂಗಣ ವಿನ್ಯಾಸದ ಗುತ್ತಿಗೆ ಪಡೆದಿದ್ದ ಮುಂಬೈಯ ನಾರ್ಶಿ ಆ್ಯಂಡ್ ಅಸೋಸಿಯೇಟ್ಸ್ ಕಂಪನಿಯಲ್ಲಿ ಒಳಾಂಗಣ ವಿನ್ಯಾಸದ ಯೋಜನಾ ವಿಭಾಗದಲ್ಲಿ ಅನಿಲ್ ಅವರು ಹಲವು ವರ್ಷಗಳಿಂದ ಮುಖ್ಯಸ್ಥರಾಗಿದ್ದಾರೆ. ಅನಿಲ್ ಮತ್ತು ಅವರ ತಂಡ ಒಂದು ವರ್ಷದಿಂದ ಸಂಸತ್ ಭವನದ ವಿನ್ಯಾಸದ ಕಾರ್ಯದಲ್ಲಿ ತೊಡಗಿದೆ.
ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಅನಿಲ್ ಅವರು ಗದುಗಿನ ಜೆ.ಟಿ. ಎಂಜಿನಿಯರಿಂಗ್ ಕಾಲೇಜು ಮತ್ತು ಬೆಂಗಳೂರಿನ ನಾಗಾರ್ಜುನ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಪುಣೆಯ ನಿಕ್ಮಾರ್ ಇನ್ಸ್ಟಿಟ್ಯೂಟ್ನಲ್ಲಿ ಪ್ಲಾನಿಂಗ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಎಂಬಿಎ ಪದವಿ ಪಡೆದು, ವಿವಿಧ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
4 ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಸಂಸತ್ ಭವನದ ಒಳಾಂಗಣ ವಿನ್ಯಾಸವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವ ಜವಾಬ್ದಾರಿ ನಾರ್ಶಿ ಕಂಪನಿಯ ಮೇಲಿತ್ತು.
ಸಂಸತ್ ಭವನದ ಒಳಾಂಗಣ ವಿನ್ಯಾಸಕ್ಕೆ ನಾಗಪುರದ ಸಾಗುವಾನಿ ಕಟ್ಟಿಗೆಗಳನ್ನು ಬಳಸಲಾಗಿದೆ. ಕರ್ನಾಟಕದ ಬಸವಾದಿ ಶರಣರು ಸೇರಿ ದೇಶದ ವಿವಿಧ ರಾಜ್ಯಗಳ ಶರಣರು, ಸಂತರು ಮತ್ತು ಮಹಾತ್ಮರ ಚಿತ್ರಗಳ ವಿನ್ಯಾಸ ಭವನದಲ್ಲಿದೆ.
ಸಂಸತ್ ಭವನದ ಒಳಂಗಾಣ ವಿನ್ಯಾಸ ರೂಪಿಸಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಸಂಗತಿ. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ.
-ಅನಿಲ ಅಂಗಡಿ ವಿನ್ಯಾಸಕಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.