ಲಕ್ಷ್ಮೇಶ್ವರ: ‘ಪ್ರತಿದಿನ ಉತ್ತಮ ಸಂಗೀತ ಕೇಳುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತದೆ. ಒಳ್ಳೆ ಸಂಗೀತ ದೇಹದಲ್ಲಿ ಚೈತನ್ಯ ತುಂಬುತ್ತದೆ’ ಎಂದು ಗದಗ ಪಿಪಿಜೆ ಕಾಲೇಜಿನ ಉಪನ್ಯಾಸಕ ಅಂಬಣ್ಣ ಜಮಾದರ ಹೇಳಿದರು.
ಇಲ್ಲಿನ ಶಾರದಾ ಸ್ವರಾಂಜಲಿ ಸಂಗೀತ ಪಾಠ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಟ್ಟ ಸಂಗೀತ ಶಿಕ್ಷಕ ಲಕ್ಷ್ಮಣ ತಳವಾರ ಅವರಿಗೆ ಮಂಗಳವಾರ ಜರುಗಿದ ಬೀಳ್ಕೊಡುಗೆ ಹಾಗೂ ಸಂಗೀತ ಶಿಕ್ಷಕ ಮಂಜುನಾಥ ಬದಾಮಿ ಅವರ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಗೀತಕ್ಕೆ ಮಹತ್ವದ ಸ್ಥಾನ ಇದ್ದು ಡಾ.ಪಂಡಿತ ಪುಟ್ಟರಾಜರ ಶಿಷ್ಯ ಬಳಗ ನಾಡಿನ ತುಂಬ ಸಂಗೀತ ಕಚೇರಿ ನಡೆಸುತ್ತಿದ್ದಾರೆ, ಸಂಗೀತವನ್ನು ಮನಸ್ಸಿಟ್ಟು ಕಲಿತರೆ ಅದರಲ್ಲಿ ಅಗಾಧ ಸಾಧನೆ ಮಾಡಲು ಸಾಧ್ಯ’ ಎಂದು ಕಲ್ಲೂರಿನ ಸಂಗೀತ ಶಿಕ್ಷಕ ಮಹಾಂತೇಶ ಶಾಸ್ತ್ರೀ ಹಿರೇಮಠ ಹೇಳಿದರು.
ನಿವೃತ್ತ ಶಿಕ್ಷಕ ಎಸ್.ಎಸ್. ನಾಗಲೋಟಿ ಮಾತನಾಡಿ, ‘ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆಯನ್ನು ಮರೆಸುವ ಶಕ್ತಿ ಇದೆ’ ಎಂದರು.
ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆ ಸಂಸ್ಥಾಪಕ ಮಂಜುನಾಥ ಮುಳುಗುಂದ, ಅರ್ಚಕ ಸಿದ್ದಲಿಂಗಯ್ಯ ಹಿರೇಮಠ, ಶಿಕ್ಷಕಿ ಮೈತ್ರಾದೇವಿ ಹಿರೇಮಠ ಮಾತನಾಡಿದರು. ಸಂಸ್ಥೆಯ ಗೌರವಾಧ್ಯಕ್ಷ ಪಂಚಯ್ಯ ಸಾಲಿಮಠ, ಕಾರ್ಯದರ್ಶಿ ಸಾವಿತ್ರಿ ಮುಳುಗುಂದ, ಪ್ರೇಮಾ ಮುಳುಗುಂದ, ಐ.ಸಿ. ಕಣವಿ, ಮಂಜುನಾಥ ಹುಣಿಸಿಮರದ, ಕಿರಣ ನಾಗಲೋಟಿ, ಶಿವಶಂಕರ ಅಂಬಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.