
ನರೇಗಲ್: ಪಟ್ಟಣದ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಶನಿವಾರ ಭಾರತ ಮಾತೆ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು. ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಿದರು.
ಗದಗ ಮಾರ್ಗದ ಕೊಂತಿ ಮಲ್ಲಯ್ಯ ದೇವಸ್ಥಾನದಿಂದ ಆರಂಭವಾದ ಯಾತ್ರೆ ಗ್ರಾಮದೇವಿ ದೇವಸ್ಥಾನ, ಸಂತೆ ಬಜಾರದ ಗಣೇಶ ಗುಡಿ, ಪಾದಗಟ್ಟಿ, ಮಾರೆಮ್ಮ ದೇವಸ್ಥಾನದ, ಹಳೇ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹೊಸ ಬಸ್ ನಿಲ್ದಾಣದ, ಪಟ್ಟಣ ಪಂಚಾಯಿತಿ ಮೂಲಕ ಸಂಚರಿಸಿ ಮೂಲ ಸ್ಥಳಕ್ಕೆ ತಲುಪಿತು.
ಯಾತ್ರೆಯಲ್ಲಿ ಕರಡಿ ಮಜಲು, ಭಜನಾ ಮೇಳ, ದುರಗಮರಗಿ ನೃತ್ಯ, ಚಂಡಿ ವಾದ್ಯ, ಡೊಳ್ಳು, ನಂದಿ ಕೋಲು ಸೇರಿದಂತೆ ವಿವಿಧ ಕಲಾ ತಂಡಗಳು ಆಕರ್ಷಿಸಿದವು. ಭಾರತಮಾತಾ ಕೀ ಜೈ, ಸನಾತನ ಧರ್ಮಕ್ಕೆ ಜಯವಾಗಲಿ, ಹಿಂದೂ ಧರ್ಮಕ್ಕೆ ಜಯವಾಗಲಿ, ಹರಹರ ಮಹಾದೇವ ಎಂದು ಘೋಷಣೆಗಳನ್ನು ಜನರು ಯಾತ್ರೆಯೂದ್ದಕ್ಕೂ ಕೂಗಿ ಸಂಭ್ರಮಿಸಿದರು.
ಪೂರ್ವಜರು ತ್ಯಾಗ ಮಾಡಿದ ಪರಿಣಾಮ ಸಂಸ್ಕೃತಿ ಜೀವಂತವಾಗಿದ್ದು, ಉಳಿಸಿ ಬೆಳೆಸುವ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ಶೋಭಾಯಾತ್ರೆ ಯಶಸ್ವಿಯಾಗಿದೆ. ಜನರನ್ನು ಒಗ್ಗೂಡಿಸಿ ಅಖಂಡ ಹಿಂದೂ ಸಮಾಜ ನಿರ್ಮಿಸಲು ಕಾರ್ಯಕ್ರಮ ಪೂರಕವಾಗಿವೆ ಎಂದು ಹಿಂದೂ ಸಮ್ಮೇಳನ ಸಮಿತಿ ಮುಖಂಡರು ಅಭಿಪ್ರಾಯಪಟ್ಟರು.
ನರೇಗಲ್ ಹೋಬಳಿ ವ್ಯಾಪ್ತಿಗೆ ಒಳಪಡುವ ಬೂದಿಹಾಳ, ಮಾರನಬಸರಿ, ಜಕ್ಕಲಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಹೊಸಳ್ಳಿ, ತೋಟಗಂಟಿ, ಕೋಚಲಾಪುರ, ಕೋಡಿಕೊಪ್ಪ, ಅಬ್ಬಿಗೇರಿ, ಯರೇಬೇಲೇರಿ, ದ್ಯಾಂಪುರ. ಡ.ಸ. ಹಡಗಲಿ ಸೇರಿದಂತೆ ವಿವಿಧ ಗ್ರಾಮಗಳಿಂದ ಹಿಂದೂ ಯುವಕ-ಯುವತಿಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಠಾಣೆ ಪಿಎಸ್ಐ ಐಶ್ವರ್ಯ ನಾಗರಾಳ ನೇತೃತ್ವದ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಯಾತ್ರೆ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.