ADVERTISEMENT

ನರೇಗಲ್ | ಪೌರಕಾರ್ಮಿಕರಿಗೆ ವಿತರಣೆಯಾಗದ ಬೆಳಗಿನ ಉಪಾಹಾರ

10 ತಿಂಗಳಿಂದ ಸಿಗದ ಸೌಲಭ್ಯ: ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 2:53 IST
Last Updated 23 ಸೆಪ್ಟೆಂಬರ್ 2025, 2:53 IST
ಫಕೀರಪ್ಪ ಮಳ್ಳಿ
ಫಕೀರಪ್ಪ ಮಳ್ಳಿ   

ನರೇಗಲ್:‌ ಪಟ್ಟಣದ ಸ್ವಚ್ಛತೆ, ಜನರ ಆರೋಗ್ಯ ಕಾಪಾಡುವುದರ ಜತೆಗೆ ಗ್ರಾಮದ ಸೌಂದರ್ಯ ಹೆಚ್ಚಿಸುವುದಕ್ಕೆ ನಿತ್ಯ ಪರಿಶ್ರಮ ಪಡುವ ಪೌರಕಾರ್ಮಿಕರಿಗೆ ಕಳೆದ 10 ತಿಂಗಳಿಂದ ಬೆಳಗಿನ ಉಪಾಹಾರ ನೀಡುತ್ತಿಲ್ಲ. ಅವರ ಉಪಾಹಾರಕ್ಕೆ ಮೀಸಲಿಟ್ಟ ಅನುದಾನ ಪಟ್ಟಣ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಬಡ ಹಾಗೂ ಹಿಂದುಳಿದ ಪರಿಶಿಷ್ಟ ಜಾತಿಯ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಪೌರಕಾರ್ಮಿಕರ ದಿನಾಚರಣೆ ಬಂದಾಗ ಮಾತ್ರ ನೆನಪು ಮಾಡಿಕೊಂಡು ಪರಿಕರ, ಸುರಕ್ಷಾ ಕವಚಗಳನ್ನು ನೀಡುತ್ತಾರೆ. ಕಾಲೊನಿಯಲ್ಲಿ ಕಸಬಿದ್ದರೆ, ಚರಂಡಿ ಸ್ವಚ್ಛವಾಗಿರದಿದ್ದರೆ, ಸಾರ್ವಜನಿಕ ಕಾರ್ಯಕ್ರಮಗಳು ಬಂದರೆ ನಮಗೆ ಹೆಚ್ಚಿನ ಕೆಲಸ ನೀಡುತ್ತಾರೆ. ಆದರೆ, ಬೆಳಗಿನ ಉಪಾಹಾರ ಸೇರಿದಂತೆ ಯಾವುದೇ ಕಷ್ಟಕ್ಕೆ ಸ್ಪಂದಿಸುವುದಿಲ್ಲ’ ಎಂದು ಪೌರಕಾರ್ಮಿಕರು ಅವಲತ್ತುಕೊಂಡಿದ್ದಾರೆ.

‘ಸಾಹೇಬರ ಬಳಿ ಉಪಾಹಾರ ಕೇಳಿ, ಕೇಳಿ ಸಾಕಾಗಿದೆ. ಇಂದಿರಾ ಕ್ಯಾಂಟೀನಲ್ಲಿ ಕೊಡಿಸುತ್ತೇವೆ ಅಂತಾರೆ, ಆದರೆ ಕೊಡಿಸುತ್ತಿಲ್ಲ’ ಎಂದು ಪೌರಕಾರ್ಮಿಕರ ಸಂಘದ ನರೇಗಲ್ ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ ದೂರಿದ್ದಾರೆ.

ADVERTISEMENT

ಸದ್ಯ ಇಲ್ಲಿನ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗೆ ಮೂವರು ಮಹಿಳಾ ಹಾಗೂ 12 ಮಂದಿ ಪುರುಷ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಯಕದಲ್ಲಿ ಬೇಸರ ಮಾಡಿಕೊಳ್ಳದೆ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಪ್ರತಿದಿನ ಕೆಲಸ ನಿರ್ವಹಿಸುತ್ತಿದ್ದಾರೆ. ಚಳಿಯಲ್ಲಿ ನಡುಗುತ್ತಾ ಬರುವ ಅವರಿಗೆ ಮಾನವೀಯತೆ ದೃಷ್ಟಿಯಿಂದಲೂ ಚಹಾ, ಉಪಾಹಾರ ನೀಡದಿರುವುದು ಶೋಚನೀಯವಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

‘ಹತ್ತು ತಿಂಗಳಿಂದ ಪೌರಕಾರ್ಮಿಕರಿಗೆ ಉಪಾಹಾರ ನೀಡದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು, ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ದಲಿತ ಮುಖಂಡ ಸೋಮಪ್ಪ ಹನಮಸಾಗರ ಆಗ್ರಹಿಸಿದ್ದಾರೆ.

2022ರವರಗೆ ಪೌರಕಾರ್ಮಿಕರಿಗೆ ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಪ್ರತಿ ದಿನ ₹20ರಂತೆ ಉಪಾಹಾರ ವೆಚ್ಚವೆಂದು ಮಾಸಿಕ ವೇತನದಲ್ಲಿ ಪಾವತಿಸಲಾಗುತ್ತಿತ್ತು. ತದನಂತರ ಸರ್ಕಾರವು ಬೆಳಗಿನ ಉಪಾಹಾರ ವೆಚ್ಚವನ್ನು ₹35ಕ್ಕೆ ಹೆಚ್ಚಿಸಿ ಭತ್ಯೆಯನ್ನು ನಗದು ರೂಪದಲ್ಲಿ ನೀಡದಂತೆ ಷರತ್ತು ವಿಧಿಸಿತು. ಅಲ್ಲದೆ 2024ರಲ್ಲಿ ಎಲ್ಲಾ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಆದೇಶ ಹೊರಡಿಸಿತು. ಆದರೂ ಸಹ ನರೇಗಲ್‌ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡದೆ ಉಪಾಹಾರ ನೀಡದೆ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. 

‘ಆರು ತಿಂಗಳ ಹಿಂದೆಯೇ ಉಪಾಹಾರ ಕೊಡುವುದನ್ನು ಆರಂಭಿಸುವಂತೆ ಹೇಳಿದ್ದೆ. ನಿಲ್ಲಿಸಿರುವ ಕುರಿತು ಮಾಹಿತಿ ಇಲ್ಲ ಒಂದುವೇಳೆ ನಿಲ್ಲಿಸಿದ್ದರೆ ಆರಂಭಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ತಿಳಿಸಿದ್ದಾರೆ. 

‘ನಮ್ಮಲ್ಲಿ ಬಹಳ ಜನರು ನಿವೃತ್ತಿಯಾಗಿದ್ದಾರೆ ಹಾಗೂ ಪಟ್ಟಣವು ಬೆಳೆಯುತ್ತಿದೆ. ಹಾಗಾಗಿ ಸರ್ಕಾರ 10 ಜನ ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ಒದಗಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ ಆಗ್ರಹಿಸಿದ್ದಾರೆ.

ಮಹೇಶ ಬಿ. ನಿಡಶೇಶಿ
ರಮೇಶ ಹಲಗಿಯವರ
ಅಂಗಡಿಯವರ ಬಿಲ್‌ ಕೊಡುವಲ್ಲಿ ವಿಳಂಬವಾಗಿ ಉಪಾಹಾರ ಕೊಡುವುದು ನಿಂತ್ತಿತ್ತು. ಈಚೆಗೆ ಹಾಲಕೆರೆ ಅಂಗಡಿ ಬಿಲ್‌ ಕೊಟ್ಟಿದ್ದೇವೆ ಮರಳಿ ಉಪಾಹಾರ ಆರಂಭವಾಗಲಿದೆ
ಫಕೀರಪ್ಪ ಮಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ
ಇಂದಿರಾ ಕ್ಯಾಂಟೀನ್‌ ಅಥವಾ ಬೇರೆಕಡೆಯಾದರು ಸಹ ಪೌರ ಕಾರ್ಮಿಕರಿಗೆ ಆದಷ್ಟು ಬೇಗ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುವುದು
ಮಹೇಶ ಬಿ. ನಿಡಶೇಶಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪೌರಕಾರ್ಮಿಕರು ಗಟ್ಟಿಯಾಗಿ ಕೇಳುವುದಿಲ್ಲ ಹೀಗಾಗಿ ಜನರಲ್‌ ಫಂಡ್‌ನಲ್ಲಿ ಅನುದಾನದ ಕೊರತೆವೆಂದು ಉಪಾಹಾರ ಕೊಡಿಸುವುದು ನಿಲ್ಲಿಸಿದ್ದಾರೆ
ರಮೇಶ ಹಲಗಿಯವರ ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಬಿಲ್‌ ಮಾಡುವುದರಲ್ಲಿ ವಿಳಂಬ ಪೌರಕಾರ್ಮಿಕರಿಗೆ ಉಪಾಹಾರ ನೀಡಲು ಇಲ್ಲಿನ ಎಲ್ಲಾ ಉಪಾಹಾರ ಅಂಗಡಿಯರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಕಾರಣ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅವರಿಗೆ ಸರಿಯಾದ ಸಮಯಕ್ಕೆ ಉಪಹಾರದ ಬಿಲ್‌ ನೀಡುವುದಿಲ್ಲ. ಹೀಗಾಗಿ ಈಗಾಗಲೇ ಅನ್ನದಾನೇಶ್ವರ ಹೋಟೆಲ್ ಅಮರೇಶ್ವರ ಹೋಟೆಲ್ ಅಬ್ಬಿಗೇರಿ ರಸ್ತೆಯ ಕಲ್ಲಪ್ಪನ ಅಂಗಡಿ ಸೇರಿದಂತೆ ಅನೇಕ ಉಪಾಹಾರ ಅಂಗಡಿಗಳು ತಿಂಡಿ ನೀಡುತ್ತಿಲ್ಲ. ಎಲ್ಲ ಕಡೆಯೂ ಬಿಲ್‌ ಪಾವತಿ ವಿಳಂಬವಾದ ಕಾರಣ ಹಿಂದೇಟು ಹಾಕುತ್ತಿದ್ದೇವೆ ಎಂದು ಅಂಗಡಿಯವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.