
ನರಗುಂದ: ಮುದ್ರಣ ಮಾಧ್ಯಮ ಇಂದು ಅತ್ಯುನ್ನತ ಮಾಧ್ಯಮವಾಗಿದೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಯುಟ್ಯೂಬರ್ ಹಾವಳಿಯಿಂದ ನಿಜವಾದ, ಪ್ರಾಮಾಣಿಕ ಪತ್ರಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಮಾಧ್ಯಮಗಳು ಟೀಕೆಗೆ ಮೀಸಲಾಗದೇ ಸಮಾಜದ ಅಂಕುಡೊಂಕು ತಿದ್ದಲು ಮುಂದಾಗಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಆಶ್ರಯದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ರೈತಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳು ದ್ವೇಷವನ್ನು ಇಟ್ಟುಕೊಂಡು ಕಾರ್ಯ ಮಾಡದೇ ಸಮಾಜ ಸುಧಾರಣೆ ವಿಷಯಗಳು ಸಾಕಷ್ಟಿವೆ. ಆ ದಿಕ್ಕಿನಲ್ಲಿ ಪತ್ರಿಕೆಗಳು ಹೆಜ್ಜೆ ಇಡಬೇಕು. ಬರೀ ಟೀಕೆಗಳನ್ನೇ ಮಾಡುತ್ತಾ ಹೋದರೆ ಒಳ್ಳೆಯದನ್ನು ಎಲ್ಲಿ ಹುಡುಕುವುದು. ಸಮಾಜದಲ್ಲಿ ಮಕ್ಕಳ ಪಾತ್ರ ಏನು ಎಂಬುದನ್ನು ಪತ್ರಿಕೆಗಳ ಮುಖಾಂತರ ಪ್ರಸ್ತುತ ಪಡಿಸಬೇಕಾಗಿದೆ ಎಂದರು.
ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಕಳಸಾಬಂಡೂರಿ, ಮಹದಾಯಿ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕು. ಪಕ್ಷಾತೀತವಾಗಿ ಪ್ರಯತ್ನ ಮಾಡಬೇಕು. ಮಹದಾಯಿ ಹೋರಾಟ ರಾಷ್ಟ್ರಮಟ್ಟದಲ್ಲಿ ಮಿಂಚಲು ನರಗುಂದದ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.
ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿದರು. ವೇದಿಕೆಯಲ್ಲಿ 2025-28ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡ ತಾಲ್ಲೂಕಾಧ್ಯಕ್ಷ ಸಂಗನಗೌಡ ಖಾನಪ್ಪಗೌಡ್ರ, ಉಪಾಧ್ಯಕ್ಷ ಪ್ರಭು ಗುಡಾರದ, ಪ.ಕಾರ್ಯದರ್ಶಿ ರಾಜು ಹೊಸಮನಿ, ಕಾರ್ಯದರ್ಶಿ ಉಮೇಶ ಬೋಳಶೆಟ್ಟಿ, ಖಜಾಂಚಿ ಎಸ್. ಎಸ್. ಮಣ್ಣೂರಮಠ ಹಾಗೂ ಕಾರ್ಯಕಾರಿಣಿ ಸದಸ್ಯರಿಗೆ ಕಾನಿಪ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಪ್ರತಿಜ್ಞಾ ವಿಧಿ ಭೋದಿಸಿದರು.
ಅಧ್ಯಕ್ಷತೆ ವಹಿಸಿ ಸಂಗನಗೌಡ ಖಾನಪ್ಪಗೌಡ್ರ ಮಾತನಾಡಿದರು. ಪತ್ರಿಕಾ ವಿತರಿಕರನ್ನು ಸನ್ಮಾನಿಸಲಾಯಿತು ಮತ್ತು 2024-25 ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ದನಕರುಗಳಿಗೆ ಉಚಿತವಾಗಿ ಆರೋಗ್ಯ ಚಿಕಿತ್ಸೆ ನೀಡುತ್ತಿರುವ ಚಿಕ್ಕನರಗುಂದ ಗ್ರಾಮದ ಶಿವಾನಂದ ಬಾಚಿ ರೈತರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಪತ್ರೀವನಮಠದ ಗುರುಸಿದ್ದವೀರ ಶಿವಾಚಾರ್ಯರು, ಶಾಂತಲಿಂಗ ಸ್ವಾಮೀಜಿ,, ಶಿರೋಳ ಯಚ್ಚರೇಶ್ವರ ಗವಿಮಠದ ಯಚ್ಚರ ಸ್ವಾಮೀಜಿ,, ಕೊಣ್ಣೂರ ವಿರಕ್ತಮಠದ ಚನ್ನವೀರ ಸ್ವಾಮೀಜಿ,, ಬ್ರಹ್ಮಕುಮಾರಿ ಪ್ರಭಕ್ಕ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಶಂಕರ ಅಂಬಲಿ ಇತರರಿದ್ದರು. ಸಿ.ಬಿ.ಸುಬೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಹೊಸಮನಿ ಸ್ವಾಗತಿಸಿದರು. ಬಸವರಾಜ ಹಲಕುರ್ಕಿ ನಿರೂಪಿಸಿ,ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.