
ಮುಂಡರಗಿ: 'ರಾಷ್ಟ್ರೀಯ ಪರಿಕಲ್ಪನೆ ತುಂಬಾ ವಿಶಾಲವಾಗಿದೆ. ಅದು ನಮ್ಮ ಧರ್ಮ, ಜಾತಿ, ಮತ, ಪಂತಗಳನ್ನು ಮೀರಿ ನಮ್ಮನ್ನೆಲ್ಲ ಒಂದುಗೂಡಿಸುತ್ತದೆ. ಆದ್ದರಿಂದ ನಾವು ಯಾವುದೇ ಜಾತಿ, ಮತಗಳಿಗೆ ಸೀಮಿತರಾಗದೆ, ಅಪ್ಪಟ ಭಾರತೀಯರಾಗಬೇಕು' ಎಂದು ನಿವೃತ್ತ ಉಪನ್ಯಾಸಕ ಆರ್.ಕೆ.ರಾಯನಗೌಡರ ತಿಳಿಸಿದರು.
ಇಲ್ಲಿಯ ಕ.ರಾ.ಬೆಲ್ಲದ ಪದವಿ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ಭಾಷಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ತಜ್ಞ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಅಪ್ಪಟ ರಾಷ್ಟ್ರ ಭಕ್ತರಾಗಿದ್ದರು. ರಾಷ್ಟ್ರೀಯ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಪ್ರಾಚಾರ್ಯ ಸಂತೋಷ ಹಿರೇಮಠ ಮಾತನಾಡಿ, ಮಾತನಾಡುವುದು ಒಂದು ಉತ್ತಮ ಕಲೆಯಾಗಿದ್ದು, ವಿದ್ಯಾರ್ಥಿಗಳು ಭಾಷಣ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಉತ್ತಮ ಮಾತುಗಾರಿಕೆ ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಭಾಷಣ ಸ್ಪರ್ಧೆಯಲ್ಲಿ ಲಕ್ಷ್ಮಿ ಪೂಜಾರ ಪ್ರಥಮ, ಕವಿತಾ ಕಲ್ಗುಡಿ ದ್ವಿತಿಯ, ವಿಜಯಲಕ್ಷ್ಮಿ ಗೊಂಡಬಾಳ ತೃತಿಯ ಹಾಗೂ ತನಿಷಾ ಕೊಪ್ಪಳ ಸಮಾಧಾನಕರ ಬಹುಮಾನ ಪಡೆದುಕೊಂಡರು. ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಉಪನ್ಯಾಸಕರಾದ ಸಚಿನ್ ಉಪ್ಪಾರ, ಆರ್.ಎಚ್.ಜಂಗಣವಾರಿ, ಮಂಜುಳಾ ಸಜ್ಜನರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.