ಲಕ್ಕುಂಡಿ: ಇಲ್ಲಿಯ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಿತು.
ದಂಡಿನ ದುರ್ಗಾದೇವಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮದ 18 ಮಂದಿ ಗರ್ಭಿಣಿಯರು ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ಪಟ್ಟರು.
ಅವರಿಗೆ ಕುಂಕಮ, ಬಳೆ, ಕುಪ್ಪಸ, ಹೂವು, ಅಡಿಕೆ, ಎಲೆಗಳನ್ನು ಉಡಿ ತುಂಬಿ ಆರತಿ ಬೆಳಗಿ ಶಾಸ್ತ್ರೊಕ್ತವಾಗಿ ಸೀಮಂತ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸೋಬಾನೆ ಪದಗಳನ್ನು ಹಾಡಲಾಯಿತು. ಗರ್ಭಿಣಿಯರಿಗೆ ಹೋಳಿಗೆ, ಸಂಡಿಗೆ, ಹಪ್ಪಳ, ಕರಿದ ಮೆಣಸಿನಕಾಯಿ, ಅನ್ನ, ಸಾರು ಖಾದ್ಯ ಉಣಬಡಿಸಿಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಮುತ್ತೈದೆಯರಿಗೆ ಉಡಿ ತುಂಬಲಾಯಿತು.
ಶಂಕ್ರಯ್ಯಶಾಸ್ತ್ರೀಗಳು ಹಿರೇಮಠ ಮಾತನಾಡಿ, ‘ನವರಾತ್ರಿ ಆಚರಣೆ ವೇಳೆ ಸಾಮೂಹಿಕ ಸೀಮಂತ ನೆರವೇರಿಸಿಕೊಳ್ಳುವ ಗರ್ಭಿಣಿಯರಿಗೆ ಸರಳ ಹೆರಿಗೆ ಆಗುವುದರ ಜತೆಗೆ ಆರೋಗ್ಯವಂತ ಮಗು ಜನಿಸುತ್ತದೆ. ತಾಯಂದಿರು ಮಗುವಿಗೆ ಉತ್ತಮ ಸಂಸ್ಕಾರ ನೀಡಿ ಈ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು’ ಎಂದರು.
ಪ್ರವಚನಕಾರರಾದ ಕೊಟ್ರಯ್ಯಶಾಸ್ತ್ರೀಗಳು ನರಗುಂದಮಠ ಅವರು ಸಾಮೂಹಿಕ ಸೀಮಂತ ಕಾರ್ಯ ಮತ್ತು ದೇವಿ ಪುರಾಣ ಕಾರ್ಯಕ್ರಮದ ಕುರಿತು ವಿವರಿಸಿದರು.
ಮಂಜುನಾಥ ಗರ್ಜಪ್ಪನವರ , ಈರಪ್ಪ ಕರಿಯಲ್ಲಪ್ಪನವರ ಸಂಗೀತ ಸೇವೆ ನೀಡಿದರು. ಸೇವಾ ಸಮಿತಿಯ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎನ್.ಉಮಚಗಿ, ಶಿವಣ್ಣ ಸಜ್ಜನರ, ನಜೀರಅಹ್ಮದ ಕೀರಿಟಗೇರಿ, ವೀರಯ್ಯ ಗಂಧದ, ಮಂಜುನಾಥ ಪುರದ, ಪ್ರೇಮಾ ಮಟ್ಟಿ, ನೀಲಮ್ಮ ವಡ್ಡರ, ಸಾವಿತ್ರಿ ಯಲಿಶಿರುಂಜ, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.
25 ವರ್ಷಗಳಿಂದ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ದೇವಿ ಪುರಾಣದ ಜತೆಗೆ ಗ್ರಾಮದ ಸರ್ವ ಧರ್ಮದ ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆನಜೀರಅಹ್ಮದ ಕೀರಿಟಗೇರಿ ಸೇವಾ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.