ಮುಂಡರಗಿ: ‘ಅಂಚೆ ಅಪಘಾತ ವಿಮಾ ಯೋಜನೆಯು ಸರಳ ಹಾಗೂ ಜನಸಾಮಾನ್ಯರ ಕೈಗೆಟುಕುವ ಉಪಯುಕ್ತ ವಿಮಾ ಯೋಜನೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅಂಚೆ ಇಲಾಖೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.
ತಾಲ್ಲೂಕಿನ ಡಂಬಳ ಹೋಬಳಿಯ ಚಿಕ್ಕವಡ್ಡಟ್ಟಿ ಗ್ರಾಮದ ಗ್ರಾಮೀಣ ಶಾಖಾ ಅಂಚೆ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಅವರು ಮಾತನಾಡಿದ ಅವರು, ‘ಭಾರತೀಯ ಅಂಚೆ ಇಲಾಖೆ ಅತ್ಯಂತ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ಸೇವೆ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ’ ಎಂದರು.
‘ಅಂಚೆ ಇಲಾಖೆ ಉಳಿತಾಯ ಯೋಜನೆ, ಸುಖನ್ಯಾ ಸಮೃದ್ಧಿ, ವಿಮಾ ಉತ್ಪನ್ನಗಳು ಮತ್ತು ಡಿಜಿಟಲ್ ಸೇವೆ ಸೇರಿದಂತೆ ಅಂಚೆ ಇಲಾಖೆ ನೀಡುವ ವಿವಿಧ ಉತ್ಪನ್ನಗಳು ಮತ್ತು ಸೇವೆಗಳ ಸದುಪಯೋಗ ಪಡೆದುಕೊಳ್ಳುಲು ಪ್ರತಿಯೊಬ್ಬರು ಮುಂದಾಗಬೇಕು. ಇದರಿಂದ ಇಲಾಖೆಗೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗಲಿದೆ’ ಎಂದರು.
ಗ್ರಾಮ ಹಿರಿಯರಾದ ಈಶ್ವರಪ್ಪ ರಂಗಪ್ಪನವರ ಮಾತನಾಡಿದರು. ಜಿಲ್ಲಾ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ ಅವರು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬಸನಗೌಡ ಕೆಂಚನಗೌಡರ, ಶಾಖಾ ಅಂಚೆ ಕಚೇರಿ ಪಾಲಕ ಡಿ.ಎಫ್. ಹಡಪದ, ಗ್ರಾಮ ಪಂಚಾಯಿತಿ ಸದಸ್ಯ ಬಸಪ್ಪ ಮಾಯಣ್ಣವರ, ಉಡಚವ್ವ ಹನಕನಹಳ್ಳಿ, ಅಂಚೆ ಮೇಲ್ವಿಚಾರಕ ರವಿ ಜಾಧವ, ನಾಗರಾಜ ವಿಭೂತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.