
ಗಜೇಂದ್ರಗಡ: ಮಕ್ಕಳು ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಹಕಾರಿಯಾಗಿದೆ. ಮಕ್ಕಳಲ್ಲಿನ ಪ್ರತಿಭಾನ್ವೇಷಣೆ ಹಾಗೂ ನಾಯಕತ್ವ ಗುಣ ಬೆಳವಣಿಗೆಗೆ ಇದು ಪೂರಕವಾಗಿದೆ ಎಂದು ಶಾಲೆಯ ಪ್ರಾಚಾರ್ಯ ಎಸ್.ಎಸ್. ಕರ್ಜಗಿ ಹೇಳಿದರು.
ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಆವರಣದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ತಮ್ಮ ಕಲೆ ಪ್ರಸ್ತುತಪಡಿಸಬೇಕುʼ ಎಂದರು.
ಕುಂಟೋಜಿ, ಮ್ಯಾಕಲಝರಿ, ವದೇಗೋಳ, ಜಿಗೇರಿ, ಕಾಲಕಾಲೇಶ್ವರ, ಬೆಣಸಮಟ್ಟಿ, ಗೌಡಗೇರಿ, ಭೈರಾಪುರ, ರಾಜೂರ, ದಿಂಡೂರ ಗ್ರಾಮಗಳ ಪ್ರಾಥಮಿಕ ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಳಕವ್ವ ಜೊಳ್ಳಿಯವರ ಉದ್ಘಾಟಿಸಿದರು. ಶಿಕ್ಷಕರಾದ ಎಸ್.ಕೆ. ಸರಗಣಾಚಾರಿ, ಎ.ಕೆ.ಒಂಟಿ, ಬಿ.ಎಸ್.ಅಣ್ಣಿಗೇರಿ, ಪಿ.ಪಿ.ರಾಠೋಡ, ಕೆ.ಐ.ವಸ್ತದ, ಸಿ.ಆರ್.ಪಿಗಳಾದ ಕೆ.ಎಸ್.ವನ್ನಾಲ, ಎಂ.ವಿ.ಚಿನ್ನೂರ, ಎಂ.ಯು.ಗೋಡೆಕಾರ ಇದ್ದರು.