ADVERTISEMENT

ಎ.ಸಿ ನೇತೃತ್ವದಲ್ಲಿ ಕಾರ್ಯಾಚರಣೆ, ದಂಡ ವಸೂಲಿ

ಗದಗ ನಗರದ ವಿವಿಧೆಡೆ ಅಧಿಕಾರಿಗಳಿಂದ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 5:04 IST
Last Updated 21 ಏಪ್ರಿಲ್ 2021, 5:04 IST
ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ಮಂಗಳವಾರ ವಿವಿಧೆಡೆ ಕಾರ್ಯಾಚರಣೆ ನಡೆಯಿತು
ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ಮಂಗಳವಾರ ವಿವಿಧೆಡೆ ಕಾರ್ಯಾಚರಣೆ ನಡೆಯಿತು   

ಗದಗ: ಕೋವಿಡ್ ಎರಡನೇ ಅಲೆ ತೀವ್ರಗೊಂಡಿರುವ ಕಾರಣ ಜಿಲ್ಲಾಡಳಿತದ ವತಿಯಿಂದ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಗಳವಾರ ಜನರಲ್ಲಿ ತಿಳಿವಳಿಕೆ ಮೂಡಿಸಲಾಯಿತು. ಜತೆಗೆ ಮಾಸ್ಕ್ ಧರಿಸದೇ ಅಡ್ಡಾಡುತ್ತಿದ್ದವರಿಗೆ ಅಧಿಕಾರಿಗಳು ದಂಡ ವಿಧಿಸಿದರು.

ನಗರದಲ್ಲಿ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ನೇತೃತ್ವದಲ್ಲಿ ಶಹರ ಠಾಣೆಯಿಂದ ಬ್ಯಾಂಕ್ ರೋಡ್, ಸ್ಟೇಶನ್ ರಸ್ತೆ ಸೇರಿ ವಿವಿಧೆಡೆ ಕಾರ್ಯಾಚರಣೆ ನಡೆಸಲಾಯಿತು.

‘ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ತೀವ್ರವಾಗಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಕಂದಾಯ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳ ಜಂಟಿ ತಂಡವು ಹಲವೆಡೆ ಸಂಚರಿಸಿ, ಜಾಗೃತಿ ಮೂಡಿಸಿದೆ. ನಿಯಮ ಉಲ್ಲಂಘಿಸಿದವರ ಮೇಲೆ ಸರ್ಕಾರದ ಮಾರ್ಗಸೂಚಿ ಪ್ರಕಾರ ದಂಡ ವಿಧಿಸಲಾಯಿತು’ ಎಂದು ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.

ADVERTISEMENT

ಗದಗ ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾದವ, ಗದಗ ಶಹರ ಸಿಪಿಐ ಸಾಲಿಮಠ ಸೇರಿ ಅನೇಕರು ಶಹರ ಠಾಣೆಯಿಂದ ಸಿ.ಪಿ. ಮಾಳಶೆಟ್ಟಿ ವೃತ್ತ, ಬ್ಯಾಂಕ್ ರೋಡ್, ಹುಯಿಲ ಗೋಳ ನಾರಾಯಣರಾವ ವೃತ್ತ, ಮಹೇಂದ್ರಕರ ವೃತ್ತ, ಗಾಂಧಿ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿದರು.

₹250 ದಂಡ

‘ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸರ್ಕಾರದ ಜತೆಗೆ ಸಹಕರಿಸಬೇಕು. ಕೋವಿಡ್‌–19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಂಚರಿಸಬೇಕು. ಇಲ್ಲದಿದ್ದರೆ ₹250 ದಂಡ ವಿಧಿಸಲಾಗುವುದು’ ಎಂದು ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.