ADVERTISEMENT

ದಿನವಿಡೀ ಬಿಸಿಲಿನ ಧಗೆ; ಸಂಜೆ ಆಲಿಕಲ್ಲು ಮಳೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:36 IST
Last Updated 23 ಮೇ 2019, 13:36 IST
ನರಗುಂದದಲ್ಲಿ ಆಲಿಕಲ್ಲಿ ಮಳೆಸುರಿದ ಸಂದರ್ಭದಲ್ಲಿ ಚಿಣ್ಣರು ಅವುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.
ನರಗುಂದದಲ್ಲಿ ಆಲಿಕಲ್ಲಿ ಮಳೆಸುರಿದ ಸಂದರ್ಭದಲ್ಲಿ ಚಿಣ್ಣರು ಅವುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.   

ಗದಗ: ದಿನವಿಡೀ ಬಿಸಿಲ ಧಗೆಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆಗೆ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆ ತಂಪೆರೆಯಿತು. ನರೇಗಲ್‌, ಮುಳಗುಂದ, ನರಗುಂದ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನ ಯಳವತ್ತಿಯಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಸುರಿಯಿತು. ಮುಂಡರಗಿ, ಡಂಬಳ, ಗಜೇಂದ್ರಗಡ, ರೋಣದಲ್ಲಿ ಗುಡುಗು, ಮಿಂಚು ಸಹಿತ 1 ಗಂಟೆ ಮಳೆ ಆರ್ಭಟಿಸಿತು.

ಕಳೆದೊಂದು ವಾರದಿಂದ ಮಳೆ ಬಿಡುವು ನೀಡಿದ್ದರಿಂದ ಜಿಲ್ಲೆಯಲ್ಲಿ ಮತ್ತೆ ಸಂಪೂರ್ಣ ಬೇಸಿಗೆಯ ವಾತಾವರಣ ಸೃಷ್ಟಿಯಾಗಿತ್ತು. ಗುರುವಾರ ಮಧ್ಯಾಹ್ನ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಸಂಜೆ 5 ಗಂಟೆ ವೇಳೆಗೆ ಆಗಸದಲ್ಲಿ ಕರಿ ಮೋಡಗಳು ದಟ್ಟೈಸಿ, ಕತ್ತಲು ಕವಿದಿದ್ದರಿಂದ ವಾಹನ ಸವಾರರು ಹೆಡ್‌ಲೈಟ್‌ ಹಾಕಿಕೊಂಡು ಸಂಚರಿಸಿದರು.

ಸಂಜೆ ರಭಸವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ವೆಂಕಟೇಶ ಚಿತ್ರಮಂದಿರದ ರಸ್ತೆ ಮತ್ತು ಹಾತಲಗೇರಿ ನಾಕಾದ ಬಳಿ ಚರಂಡಿ ನೀರು ಉಕ್ಕಿ ರಸ್ತೆಗೆ ಹರಿಯಿತು.ಝೇಂಡಾ ವೃತ್ತ ಮತ್ತು ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತವು ಜಲಾವೃತಗೊಂಡು, ದ್ವಿಚಕ್ರ ವಾಹನ ಸವಾರರು ಪರದಾಡಿದರು.

ADVERTISEMENT

ರೈತರಲ್ಲಿ ಮೂಡಿದ ಭರವಸೆ: ಮಳೆ ಕೊರತೆಯಿಂದಾಗಿ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಆರಂಭಕ್ಕೆ ಹಿನ್ನಡೆಯಾಗಿತ್ತು. ಈಗ ಮಳೆ ಸುರಿದಿರುವುದರಿಂದ ರೈತರಲ್ಲಿ ಭರವಸೆ ಮೂಡಿದೆ. ಇದೇ ರೀತಿ ಇನ್ನೊಂದೆರಡು ಉತ್ತಮ ಮಳೆ ಲಭಿಸಿದರೆ ಬಿತ್ತನೆ ಪ್ರಾರಂಭಿಸಬಹುದು ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.