ADVERTISEMENT

ಗದಗ: ಅಂಧ ಮಕ್ಕಳ ಸಂಗೀತ ಶಾಲೆಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 3:30 IST
Last Updated 1 ನವೆಂಬರ್ 2021, 3:30 IST
ಗದುಗಿನ ವೀರೇಶ್ವರ ಪುಣ್ಯಾಶ್ರಮ
ಗದುಗಿನ ವೀರೇಶ್ವರ ಪುಣ್ಯಾಶ್ರಮ   

ಗದಗ: ಸಂಘ ಸಂಸ್ಥೆಗಳ ವಿಭಾಗದಲ್ಲಿ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ಸಂಗೀತ ಶಾಲೆಗೆ 66ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಗೀತ ಕಾಶಿ ಎಂದೇ ಪ್ರಸಿದ್ಧಿ ಪಡೆದಿದ್ದು, ಇದು ಸಂಗೀತ ಸಾಧಕರಿಗೆ ಪುಣ್ಯಭೂಮಿ ಎನಿಸಿದೆ. ಈ ಪುಣ್ಯಭೂಮಿಯ ಕರ್ತೃತ್ವ ದಿವ್ಯಶಕ್ತಿಯೇ ಗಾನಯೋಗಿ ಲಿಂ. ಪಂ.ಪಂಚಾಕ್ಷರ ಗವಾಯಿಗಳವರು.

ಸಂಘ ಸಂಸ್ಥೆ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ಸಂಗೀತ ಶಾಲೆಯಲ್ಲಿ ಪ್ರಸ್ತುತ 96 ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ADVERTISEMENT

ಗಾನಯೋಗಿ ಲಿಂ. ಪಂ.ಪುಟ್ಟರಾಜ ಕವಿ ಗುರುಗಳು 1989-90ರಲ್ಲಿ ಸಂಸ್ಥಾಪಕ ಆಜೀವ ಅಧ್ಯಕ್ಷತೆಯಲ್ಲಿ ಪಂ.ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಸ್ಥಾಪಸಿದ್ದರು. ಅವರು ಲಿಂಗೈಕ್ಯರಾದ ನಂತರಕಲ್ಲಯ್ಯಜ್ಜನವರು ಕಾರ್ಯಾಧ್ಯಕ್ಷರಾಗಿ ಗುರುಗಳು ಹಾಕಿಕೊಟ್ಟಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನಡೆಸುತ್ತಿದ್ದಾರೆ.

ಇಂದಿಗೂ ಸಹ ಇಲ್ಲಿ ನಿರಂತರವಾಗಿ ಉಚಿತ ಊಟ-ವಸತಿಯೊಂದಿಗೆ ಸಂಗೀತ, ಸಾಹಿತ್ಯದೊಂದಿಗೆ ಅಂಧ ಮಕ್ಕಳಿಗೆ ವಿಶೇಷ ಶಿಕ್ಷಣ, ಬ್ರೈಲ್‍ಲಿಪಿ ಕಲಿಕೆ, ಸಂಗೀತ ವಿದ್ವಾಂಸರಿಂದ ಕಾರ್ಯಾಗಾರ, ಮೊಬಿಲಿಟಿ ತರಬೇತಿ ಹೀಗೆ ನೂರಾರು ಅಂಧ ಮಕ್ಕಳಿಗೆ ವರ್ಷದುದ್ದಕ್ಕೂ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂತಹ ಶಾಲೆಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಎಲ್ಲ ಸಂಭ್ರಮ ಹೆಚ್ಚಿಸಿದೆ.

ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ಶಾಲೆಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದ ಸುದ್ದಿ ತಿಳಿಯುತ್ತಿದ್ದಂತೆ ಪುಣ್ಯಾಶ್ರಮದ ಅಂಧ ವಿದ್ಯಾರ್ಥಿಗಳು, ಗುರುಬಂಧುಗಳು ಸಿಹಿ ವಿತರಿಸಿ ಸಂಭ್ರಮಾಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.