ಲಕ್ಷ್ಮೇಶ್ವರ: 'ಲಕ್ಷ್ಮೇಶ್ವರದಿಂದ ದೊಡ್ಡೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು ಕಿಮೀ ರಸ್ತೆಯನ್ನು ಕೇವಲ ಒಂದು ವರ್ಷದ ಹಿಂದಷ್ಟೆ ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ನಿರ್ಮಿಸಿರುವ ನೂತನ ರಸ್ತೆ ಹಾಳಾಗಿದ್ದು ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಕನ್ನಡ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವೇದಿಕೆಯ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಲಘಟಗಿ ಮಾತನಾಡಿ, ‘ರಸ್ತೆ ನಿರ್ಮಾಣಕ್ಕಾಗಿ ಸರ್ಕಾರ ಕೋಟ್ಯಂತರ ಅನುದಾನ ನೀಡಿತ್ತು. ಆದರೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡದ ಕಾರಣ ರಸ್ತೆ ಅಲ್ಲಲ್ಲಿ ಕಿತ್ತು ಹಾಳಾಗುತ್ತಿದೆ. ಗುತ್ತಿಗೆದಾರರು ಈಗಾಗಲೇ ಒಂದು ಬಾರಿ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ. ಆದರೂ ಸಹ ಮತ್ತೆ ಅದು ಹಾಳಾಗುತ್ತಿದೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ. ಜಿಲ್ಲಾಧಿಕಾರಿಗಳು ರಸ್ತೆ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಆಗ್ರಹಿಸಿದ ಅವರು ‘ಈ ಮಾರ್ಗದಲ್ಲಿ ಕೈಗಾರಿಕೆ ವಲಯ ಇದ್ದು ನಿತ್ಯ ಹತ್ತಾರು ವಾಹನಗಳು ಸಂಚರಿಸುತ್ತವೆ. ಕಾರಣ ಎರಡು ಕಿಮೀ ಉದ್ದದ ಡಾಂಬರ್ ರಸ್ತೆ ಬದಲಾಗಿ ಸಿಸಿ ರಸ್ತೆ ಮಾಡುವ ಅಗತ್ಯ ಇದೆ’ ಎಂದರು.
ವೇದಿಕೆಯ ಮಂಜುನಾಥ ಗಾಂಜಿ, ಇಲಿಯಾಸ್ ಮೀರಾನವರ, ಜಿಲಾನಿ ಖವಾಸ್, ಸಾಹೇಬ್ಲಾಲ್ ಕಲೇಗಾರ, ರಾಜೇಸಾಬ್ ಬೇಫಾರಿ, ಮಲ್ಲಿಕ್ ಶಿರಹಟ್ಟಿ, ಸಾದಿಕ್ ಚೌರಿ, ಸೋಹಿಲ್ ಮುಳಗುಂದ, ಶರೀಫ್ ಮಂಗಳೂರ ಇದ್ದರು. ಉಪತಹಶೀಲ್ದಾರ್ ಮಂಜುನಾಥ ದಾಸಪ್ಪನವರ ಮನವಿ ಸ್ವೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.