ADVERTISEMENT

ರೋಣ| ಜೂಜಾಟ ನಿಯಂತ್ರಣಕ್ಕೆ ಕಠಿಣ ಕ್ರಮ: ಬಿ.ಎಸ್.ನೇಮಗೌಡ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 14:22 IST
Last Updated 29 ಮಾರ್ಚ್ 2025, 14:22 IST
ರೋಣ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಎಸ್‌ಸಿ ಎಸ್‌ಟಿ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿದರು
ರೋಣ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಎಸ್‌ಸಿ ಎಸ್‌ಟಿ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿದರು   

ರೋಣ: ‘ಗದಗ ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್, ಆನ್‌ಲೈನ್ ಗೇಮ್ ದಂದೆಗಳ ಮುಕ್ತ ಜಿಲ್ಲೆಯನ್ನಾಗಿಸಲು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಜೂಜಾಟಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ತಾಲ್ಲೂಕಾ ಮಟ್ಟದ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಕುಂದು ಕೊರತೆಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಸುಗಮ ಸಂಚಾರ ವ್ಯವಸ್ಥೆಗೆ ಜಾರಿಯಾದ ‘ಥರ್ಡ ಐ’ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಮಾಂಡ್ ಸೆಂಟರ್‌ನಿಂದ ಕೇವಲ ಟ್ರಾಪಿಕ್ ಮೇಲ್ವಿಚಾರಣೆಯಿಲ್ಲದೆ ಪೊಲೀಸ್ ಠಾಣೆಗಳ ಮೇಲೂ ನಿಗಾ ವಹಿಸಲಾಗಿದೆ. ಅನಗತ್ಯ ಕಾಯುವಿಕೆಯಿಂದ ದೂರುದಾರರನ್ನು ಮುಕ್ತವನ್ನಾಗಿಸಲು ಮತ್ತು ನೊಂದವರಿಗೆ ತುರ್ತು ಸೇವೆ ಸಲ್ಲಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೇವಲ 30 ನಿಮಿಷದಲ್ಲಿ ದೂರು ಸಲ್ಲಿಸಿ ಠಾಣೆಯಿಂದ ಹೊರಬರಬಹುದು. ದೂರುದಾರರನ್ನು ಅನಗತ್ಯ ಕಾಯಿಸಿದರೆ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಆಡಳಿತ ಜನರಿಗೆ ಹತ್ತಿರವಾದರೆ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿದ್ದ ಕುಂದು ಕೊರತೆ ಸಭೆಯನ್ನು ಪ್ರತಿ ತಾಲ್ಲೂಕು ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಮುದಾಯಕ್ಕೆ ಇರುವ ಸರ್ಕಾರದ ಯೋಜನೆಗಳನ್ನು ಶೇ 90ರಷ್ಟು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ತಲುಪಿಸಲು ಸಾಧ್ಯವಿದೆ. ಇನ್ನುಳಿದ ಕೆಲಸವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ತಮಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋತದಾರ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ತಹಶೀಲ್ದಾರ್ ಕೆ.ನಾಗರಾಜ, ಸಿಪಿಐ ಎಸ್.ಎಸ್. ಬೀಳಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಕುಂದು ಕೊರತೆಗಳ ಮಹಾಪೂರ: ‘ತಾಲ್ಲೂಕಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದು, ದಲಿತರಿಗೆ ಸ್ಮಶಾನಭೂಮಿ ಮಂಜೂರು. ಗ್ರಾಮ ಪಂಚಾಯಿತಿ ಕರ ವಸೂಲಿಯಲ್ಲಿ ಶೇ 25.7 ಹಣ ಸದ್ಬಳಕೆ ಆಗದೇ ಇರುವುದು. ನಕಲಿ ಜಾತಿ ಪ್ರಮಾಣ ಪತ್ರ ಹಾವಳಿ ತಡೆಗೆ ಕ್ರಮ. ರೋಣ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ. ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ನಮಗೆ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕು’ ಎಂದರು.

‘ಇತ್ತೀಚೆಗೆ ದಲಿತ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ದೊರಕುವುದು ಕಡಿಮೆಯಾಗಿದೆ. ದೂರು ದಾಖಲಿಸಿಕೊಳ್ಳುವಾಗ ಇರುವ ಉತ್ಸಾಹ ಕೊನೆಯವರೆಗೆ ಇರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಕಳೆದ ಸಭೆಯಲ್ಲಿ ವ್ಯಕ್ತವಾದ ವಿಷಯಗಳ ಬಗ್ಗೆ ಅನುಪಾಲನಾ ವರದಿಯನ್ನು ಸಲ್ಲಿಸಬೇಕು. ತಾಲ್ಲೂಕಿನಾದ್ಯಂತ ಅಕ್ರಮ ಸರಾಯಿ ಮಾರಾಟ ಮೀತಿ ಮೀರಿದ್ದು ಇದರ ಬಗ್ಗೆ ಕ್ರಮ ವಹಿಸಬೇಕು. ಹತ್ತಾರು ವರ್ಷಗಳಿಂದ ಕೆಲವೇ ಸಮಸ್ಯೆ ಚರ್ಚೆ ಮಾಡುವ ಅನಿವಾರ್ಯತೆ ಇದ್ದು, ಬದಲಾವಣೆಯಾಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.