ADVERTISEMENT

ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆಯೇ ವಿಜಯದಶಮಿ: ನರಸಿಂಹ ಕುಲಕರ್ಣಿ

ಆರ್‌ಎಸ್‌ಎಸ್‌ ಪಥಸಂಚನದಲ್ಲಿ ನರಸಿಂಹ ಕುಲಕರ್ಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:08 IST
Last Updated 13 ಅಕ್ಟೋಬರ್ 2025, 4:08 IST
ನರಗುಂದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಶತಾಬ್ಧಿ ಹಾಗೂ ವಿಜಯದಶಮಿ ಅಂಗವಾಗಿ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ನಡೆಯಿತು
ನರಗುಂದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಶತಾಬ್ಧಿ ಹಾಗೂ ವಿಜಯದಶಮಿ ಅಂಗವಾಗಿ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ನಡೆಯಿತು   

ನರಗುಂದ: ‘ವಿಜಯದಶಮಿ ನಮಗೆಲ್ಲ ವಿಜಯದ ಹಬ್ಬ. ಎಲ್ಲ ಹಬ್ಬಗಳಲ್ಲಿ ಈ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ನಮ್ಮ ಧ್ಯೇಯ. ಜಗತ್ತಿಗೆ ನಮ್ಮ ಭಾರತ ದೇಶದ ಶಕ್ತಿಯ ಕೂಗು ಕೇಳಬೇಕಾದರೆ ನಾವೆಲ್ಲ ಒಂದಾಗಬೇಕಾಗಿದೆ ಎಂದು ಸಂಘದ ಪ್ರಾಂತ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ ಹೇಳಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಶತಾಬ್ಧಿ ಹಾಗೂ ವಿಜಯದಶಮಿ ಅಂಗವಾಗಿ ಭಾನುವಾರ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ಹಾಗೂ ನಂ.1 ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

‘ದೇಶದ ಒಂದಿಂಚು ಜಾಗದಲ್ಲಿ ಸಂಘದ ಭಗವಾ ಧ್ವಜ ಹಾರಾಡಲಿಕ್ಕೆ ಬಿಡಲ್ಲ ಎಂದು ಹೇಳಿದ ಮೊದಲ ಪ್ರದಾನಿ ನೆಹರು ಅವರೇ ಕೊನೆಗೆ ಸಂಘಕ್ಕೆ ಶರಣಾಗಬೇಕಾಯಿತು. ಸಂಘದ ಮೇಲೆ ಗಾಂಧಿ ಹತ್ಯೆ ಆರೋಪ ಬಂದಾಗ, ಸ್ವಯಂಸೇವಕರ ಮೇಲೆ ದಾಳಿ, ಮನೆಗಳ ಧ್ವಂಸ, ನಿಷೇಧ, ಜೈಲುವಾಸ ಹೀಗೆ ಸಾಕಷ್ಟು ತೊಂದರೆ ಎದುರಿಸಿದ ಸಂಘವು ತನ್ನ ನಡಿಗೆಯನ್ನು ಎಲ್ಲಿಯೂ ನಿಲ್ಲಿಸಿಲ್ಲ’ ಎಂದು ಹೇಳಿದರು.

ADVERTISEMENT

‘ಸಂಘವು 1.30 ಲಕ್ಷ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. 600 ಅನಾಥಾಶ್ರಮ ನಡೆಸುತ್ತಿದೆ. ನೂರಾರು ಸಂಘದ ಶಾಲೆಗಳಿವೆ. ಹೀಗೆ ನೂರಕ್ಕೂ ಹೆಚ್ಚು ಪರಿವಾರವನ್ನು ಹೊಂದಿದೆ. ದೇಶದ ಅನೇಕ ಸಮಸ್ಯೆಗಳನ್ನು ಸಂಘ ಪರಿಹರಿಸಿದೆ. ಭಾರತ ಪರಮ ವೈಭವದ ಸ್ಥಿತಿಯನ್ನು ಹೊಂದುವುದೇ ಸಂಘದ ಗುರಿಯಾಗಿದೆ. ಅದಕ್ಕಾಗಿ ಸಂಘ ಶತಾಬ್ಧಿ ಸಂದರ್ಭದಲ್ಲಿ ಪಂಚ ಪರಿವರ್ತನೆ ಕಾರ್ಯಗಳಾದ ಸಂಸ್ಕಾರಯುತ ಕುಟುಂಬ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ನಾಗರಿಕರಿಗೆ ಶಿಷ್ಠಾಚಾರ ಪಾಲನೆ, ಸ್ವದೇಶಿ ಜೀವನ ಶೈಲಿ, ಹೀಗೆ ಎಲ್ಲ ಕಾರ್ಯಗಳನ್ನು ಮಾಡಲು ಸಂಘ ಹೊರಟಿದೆ ಎಂದರು.

‘ಅಧಿಕಾರದ ಆಸೆಗಾಗಿ ತುಷ್ಟೀಕರಣ ನೀತಿಯನ್ನು ಮುಂದುವರಿಸಿಕೊಂಡು ಬರುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ
ನರಸಿಂಹ ಕುಲಕರ್ಣಿ ವಾಗ್ದಾಳಿ ನಡೆಸಿದರು’ ಎಂದರು.

ಮಂಜಣ್ಣ ಕೋರಿ ಮಾತನಾಡಿ, ‘ರಾಷ್ಟ್ರದ ಜನತೆಗೆ ಸಂಘದ ಅವಶ್ಯಕತೆ ತುಂಬಾ ಇದೆ. ಸಂಘವೆಂದರೆ ಸ್ವರ್ಗವಿದ್ದಂತೆ’ ಎಂದರು.

ಶಾಸಕ ಸಿ.ಸಿ.ಪಾಟೀಲ ಹಾಗೂ ಪುರಸಭೆ ಸದಸ್ಯರು ಇದ್ದರು. ಸಂಜಯ ನಲವಡಿ ಸ್ವಾಗತಿಸಿದರು. ತಾಲ್ಲೂಕು. ಸಂಘಚಾಲಕ ಮಂಜುನಾಥ ಬೆಳಗಾವಿ ವಂಧಿಸಿದರು. 

ಪಥಸಂಚಲನ: ಸಂಘ ಶತಾಬ್ಧಿ ಪಥಸಂಚಲನದ ಮಾರ್ಗದುದ್ದಕ್ಕೂ ನಗರದೆಲ್ಲೆಡೆ ರಸ್ತೆಯಲ್ಲಿ ರಂಗೋಲಿ ಹಾಗೂ ಹೂಗಳಿಂದ ಅಲಂಕಾರ, ಭಗವಾಧ್ವಜಗಳ ಹಾರಾಟ, ಅಲ್ಲಲ್ಲಿ ಅನೇಕ ವೃತ್ತಗಳಲ್ಲಿ ಮಹಾಪುರುಷರ ಛದ್ಮವೇಷ ಧರಿಸಿ ಪುಟಾಣಿ ಮಕ್ಕಳ ವೇದಿಕೆ ಕಂಡು ಬಂದವು. ಭಗವಾಧ್ವಜ ಹಿಡಿದ ಸ್ವಯಂಸೇವಕರ ಸಂಚಲನದ ಮೇಲೆ ಸಾರ್ವಜನಿಕರಿಂದ ಪುಷ್ಪಗಳ ಅರ್ಪಣೆ ಎಲ್ಲೆಂದರಲ್ಲಿ ಕಂಡುಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.