
ಗದಗ: ‘ಗ್ರಾಮೀಣ ಅಭಿವೃದ್ಧಿ ಎಂಬುದು ಸರ್ಕಾರಿ ಯೋಜನೆಗಳ ಮೂಲಕ ಮಾತ್ರ ಸಾಧ್ಯವಿಲ್ಲ. ಜನರ ಸಕ್ರಿಯ ಭಾಗವಹಿಸುವಿಕೆ ಮತ್ತು ಸ್ಥಳೀಯ ಅಗತ್ಯಗಳ ಅರಿವು ಅಭಿವೃದ್ಧಿಗೆ ಮೂಲಭೂತ ಅಂಶಗಳಾಗಿವೆ’ ಎಂದು ವಿಶ್ರಾಂತ ಕುಲಪತಿ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹೇಳಿದರು.
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಹಾಗೂ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಜನ ಸಹಭಾಗಿತ್ವದಲ್ಲಿ ಗ್ರಾಮವಿಕಾಸ’ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಪಂಚಾಯತ್ ವ್ಯವಸ್ಥೆ ಬಲಿಷ್ಠವಾದಾಗ ಮಾತ್ರ ಗ್ರಾಮಗಳು ಸ್ವಾವಲಂಬನೆಯತ್ತ ಸಾಗಲು ಸಾಧ್ಯ’ ಎಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಭಟ್ ಮಾತನಾಡಿ, ‘ಹಳ್ಳಿಯ ಸಮಸ್ಯೆಗಳಿಗೆ ಹೊರಗಿನಿಂದ ಪರಿಹಾರ ಹೇರದೆ, ಅಲ್ಲಿನ ಜನರೇ ತಮ್ಮ ಪರಿಸ್ಥಿತಿಯನ್ನು ಅರಿತು, ತಮ್ಮ ಸಂಪನ್ಮೂಲಗಳ ಆಧಾರದಲ್ಲಿ ನೇರವಾಗಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡ ಮಾತನಾಡಿ, ‘ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳು ಮತ್ತು ಸಮಾಜದ ನಡುವೆ ಬೌದ್ಧಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ’ ಎಂದು ಹೇಳಿದರು.
ಯೂತ್ ಫಾರ್ ಸೇವಾ ಸಂಸ್ಥಾಪಕ ವೆಂಕಟೇಶಮೂರ್ತಿ, ಸಂಯೋಜಕ ಡಾ. ಕೆ.ಟಿ.ತಿಪ್ಪೇಸ್ವಾಮಿ ಸಂಸ್ಥೆಯ ಗ್ರಾಮೀಣ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಗಿರೀಶ್ ದೀಕ್ಷಿತ್, ಅಬ್ದುಲ್ ಅಜೀಜ್ ಮುಲ್ಲಾ ಉಪಸ್ಥಿತರಿದ್ದರು.
ಗಿರೀಶ್ ಸ್ವಾಗತಿಸಿದರು. ಶ್ರೀಧರ್ ಹಾದಿಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸ್ವಗ್ರಾಮ ಮಿತ್ರರು, ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ವಿಭಾಗದ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಗ್ರಾಮೀಣ ಸಮಾಜದ ಆಂತರಿಕತೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಜನಸಹಭಾಗಿತ್ವವೇ ಗ್ರಾಮಾಭಿವೃದ್ಧಿಯ ಶಾಶ್ವತ ಮಾದರಿ–ಪ್ರಕಾಶ್ ಭಟ್, ಸಂಪನ್ಮೂಲ ವ್ಯಕ್ತಿ
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಚಿಂತನೆಗಳನ್ನು ಆಧಾರವಾಗಿಸಿಕೊಂಡು ಶೈಕ್ಷಣಿಕ ಹಾಗೂ ಸಮುದಾಯಾಧಾರಿತ ಚಟುವಟಿಕೆಗಳನ್ನು ರೂಪಿಸುತ್ತಿದೆ–ಪ್ರೊ. ಸುರೇಶ್ ವಿ. ನಾಡಗೌಡ, ಪ್ರಭಾರ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.