ADVERTISEMENT

ವಿಧಾನ ‍ಪರಿಷತ್‌ ಚುನಾವಣೆ: ನಾನೂ ಪ್ರಬಲ ಆಕಾಂಕ್ಷಿ– ಸಚಿನ್‌ ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 4:09 IST
Last Updated 12 ನವೆಂಬರ್ 2021, 4:09 IST

ಗದಗ: ‘ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ನಾನೂ ಪ್ರಬಲ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಗುವ ಭರವಸೆ ಇದೆ. ಒಂದು ವೇಳೆ ಟಿಕೆಟ್‌ ಸಿಗದಿದ್ದರೂ ಹೈಕಮಾಂಡ್‌ ತೀರ್ಮಾನದಂತೆ ಪಕ್ಷದ ಗೆಲುವಿಗಾಗಿ ಶ್ರಮಿಸುವೆ’ ಎಂದು ಕಾಂಗ್ರೆಸ್ ಮುಖಂಡ ಸಚಿನ್‌ ಪಾಟೀಲ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠಗೊಳ್ಳುತ್ತಿದ್ದು, ಈಗ ಆಡಳಿತ ವಿರೋಧಿ ಅಲೆ ಎದ್ದಿದೆ. ಹೀಗಾಗಿ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷವು ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿಕೆ ಮಾಡುವುದಾದರೆ ಅಲ್ಪಸಂಖ್ಯಾತರಲ್ಲಿ ಸಲೀಂ ಅಹ್ಮದ್, ಪರಿಶಿಷ್ಟರ ಕೋಟಾದಡಿ ಎಫ್.ಎಚ್. ಜಕ್ಕಪ್ಪನವರಗೆ ನೀಡಬೇಕು. ಇವರನ್ನು ಹೊರತುಪಡಿಸಿ ನೀಡಿದರೆ ನನಗೇ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

‘ಕಾಂಗ್ರೆಸ್‍ನ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ತೊರೆಯುವ ಹಂತದಲ್ಲಿದ್ದರು. ಆದರೆ, ಅವರು ಮತ್ತು ನಮ್ಮ ನಡುವಿನ ಒಡನಾಟ ಚೆನ್ನಾಗಿದ್ದಿದ್ದರಿಂದ ಅವರ ಮನವೊಲಿಸಿ ತಡೆದಿದ್ದೇವೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 125ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಈ ವೇಳೆ ಅಲ್ಪಸಂಖ್ಯಾತ ನಾಯಕರಾಗಿರುವ ಸಿ.ಎಂ. ಇಬ್ರಾಹಿಂ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಈಗಿನಿಂದಲೇ ಅಭಿಯಾನ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ, ಅಭ್ಯರ್ಥಿ ಆಯ್ಕೆಯಲ್ಲಿ ತಪ್ಪಾಯಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ವರಿಷ್ಠರ ಆಯ್ಕೆ ಮಾನದಂಡ ಬೇರೆ ಇರುತ್ತದೆ. ಕಾಂಗ್ರೆಸ್‍ನಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಆದರೆ, ಗದಗ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಇದು ನಡೆಯಲಿಲ್ಲ’ ಎಂದು ಹೇಳಿದರು.

ಸಾಮಾಜಿಕ ಜಾಲತಾಣ ವಿಭಾಗದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಹೊನ್ನಿನಾಯ್ಕರ ಇದ್ದರು.

***

ಕಾಂಗ್ರೆಸ್‍ಗಿಂತಲೂ ಬಿಜೆಪಿಯಲ್ಲೇ ಹೆಚ್ಚು ಕುಟುಂಬ ರಾಜಕಾರಣವಿದೆ. ಕಾಂಗ್ರೆಸ್‍ನಿಂದ ಯಾರಾದರೂ ಬಂದಿದ್ದರೆ ಅವರ ಪಕ್ಷ ಸಂಘಟನೆ, ಪ್ರತಿಭೆಯಿಂದ ಮಾತ್ರ

-ಸಚಿನ್‌ ಡಿ. ಪಾಟೀಲ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.