ಲಕ್ಷ್ಮೇಶ್ವರ (ಗದಗ ಜಿಲ್ಲೆ): ಪಟ್ಟಣದ ಪುರಸಭೆ ಎದುರು ಸಫಾಯಿ ಕರ್ಮಚಾರಿ ಸುರೇಶ ಬಸವಾನಾಯ್ಕರ್ ಮೈ ಮೇಲೆ ಮಲ ಸುರಿದುಕೊಂಡು ಬುಧವಾರ ಪ್ರತಿಭಟನೆ ನಡೆಸಿದರು.
‘ನಾನು ಹಿಂದೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿ ಆಗಿ ಕೆಲಸ ಮಾಡಿದ್ದರೂ ಕಾಯಂ ನೌಕರಿ ಸಿಗಲಿಲ್ಲ. ಮಗನಿಗಾದರೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಕೋರಿರುವೆ. ಅದಕ್ಕೂ ಸ್ಪಂದನೆ ಇಲ್ಲ. ಅದಕ್ಕೆ ಹೀಗೆ ಪ್ರತಿಭಟಿದ್ದೇನೆ’ ಎಂದು ಸುರೇಶ ತಿಳಿಸಿದರು.
‘ಪುರಸಭೆ ಆಡಳಿತ ಮಂಡಳಿಯು ಕೆಲ ತಿಂಗಳ ಗುತ್ತಿಗೆ ಆಧಾರದಲ್ಲಿ 10ಕ್ಕೂ ಹೆಚ್ಚು ಜನರ ನೇಮಿಸಿಕೊಂಡಿದೆ. ಈಗಲಾದರೂ ಮಗನಿಗೆ ನೇಮಿಸಿಕೊಳ್ಳಬೇಕು’ ಎಂದರು. ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸಿದ ಬಳಿಕ ಸುರೇಶ ಅವರು ಪ್ರತಿಭಟನೆ ಕೈಬಿಟ್ಟರು.
‘ಪ್ರತಿಭಟಿಸಿದ ವ್ಯಕ್ತಿಗೂ, ಪುರಸಭೆಗೂ ಸಂಬಂಧ ಇಲ್ಲ. ಸುರೇಶ ಹಿಂದೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿಯಾಗಿ ಹೊರಗುತ್ತಿಗೆಯಡಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲ. ಸದ್ಯ ಕಾರ್ಮಿಕರನ್ನು ಗುತ್ತಿಗೆದಾರರು ನೇಮಿಸುತ್ತಾರೆ ಹೊರತು ಪುರಸಭೆಯಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.