ಗದಗ: ಬೆಟಗೇರಿ ಭಾಗದ ಟರ್ನಲ್ಪೇಟೆ, ಭಜಂತ್ರಿ ಓಣಿ, ಬಿ.ಬಿ.ಬಣ್ಣದ ನಗರಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಭೇಟಿ ನೀಡಿ ಹಾನಿಗೊಳಗಾದ ಸ್ಥಳ ಪರಿಶೀಲಿಸಿ, ಪರಿಹಾರ ಮತ್ತು ದುರಸ್ತಿಗಾಗಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.
ಎರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಈ ಭಾಗದ ರಾಜಕಾಲುವೆ ನೀರು ಮತ್ತು ಚರಂಡಿ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಹಾನಿಯುಂಟಾಗಿದೆ. ಹಾನಿಗೊಂಡ ಮನೆಗಳಿಗೆ ಭೇಟಿ ನೀಡಿ, ಅವರು ಪರಿಶೀಲಿಸಿದರು.
ಭಜಂತ್ರಿ ಓಣಿಯ ರಾಜಕಾಲುವೆ, ಬೆಟಗೇರಿ ಕಾಯಿಪಲ್ಯ ಮಾರ್ಕೆಟ್ ಹತ್ತಿರ ಜೆಸಿಬಿ ಮೂಲಕ ಸ್ವಚ್ಛಗೊಳಿಸುತ್ತಿರುವುದನ್ನು ವೀಕ್ಷಿಸಿದರು.
ಬಿ.ಬಿ. ಬಣ್ಣದ ನಗರ ಬಡಾವಣೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ಅಲ್ಲಿಯ ನಾಗರಿಕರು ಬಳಗಾನೂರ ರಸ್ತೆ ಹಾಗೂ ಪಕ್ಕದ ಹೊಲಗಳಿಂದ ನೀರು ಮನೆಗಳಿಗೆ ನುಗ್ಗಿ ಹಾನಿ, ರಸ್ತೆ ಮತ್ತು ಗಟಾರುಗಳು ಸಂಪೂರ್ಣವಾಗಿ ಹಾಳಾಗಿದ್ದನ್ನು ತೋರಿಸಿದರು.
25 ವರ್ಷಗಳಿಂದ ಈ ಭಾಗದಲ್ಲಿ ರಸ್ತೆ ಮತ್ತು ಗಟಾರದ ಅಭಿವೃದ್ಧಿ ಕೆಲಸ ಆಗಿಲ್ಲ. ಕೂಡಲೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭಾ ಸದಸ್ಯ ಮಾಧುಸಾ ಮೇರವಾಡೆ, ನಗರಸಭೆ ಆಯುಕ್ತ ರಮೇಶ ಸುಣಗಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಉಪ ತಹಶೀಲ್ದಾರ್ ಡಿ.ಟಿ.ವಾಲ್ಮೀಕಿ, ಕಂದಾಯ ನಿರೀಕ್ಷಕ ಜಯಪ್ರಕಾಶ ಭಜಂತ್ರಿ, ಕಿರಿಯ ಎಂಜಿನಿಯರ್ ಕಾಟೇವಾಲ ಹಾಗೂ ಸ್ಥಳೀಯ ನಿವಾಸಿಗಳಾದ ಮಾಯಪ್ಪ ಭಜಂತ್ರಿ, ನಿಂಗಪ್ಪ ದೊಡ್ಡಮನಿ, ಯಲ್ಲಪ್ಪ ಗಾರವಾಡ, ಕೃಷ್ಣ ಹಾವಣ್ಣವರ, ಗಣೇಶ ಮುತಗಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.