ADVERTISEMENT

ಶಿರಹಟ್ಟಿ: ರೇಷ್ಮೆ ಕೃಷಿಯಲ್ಲಿ ಅರಳಿದ ಸಹೋದರರ ಬದುಕು

ಮೂವರು ರೈತರಿಂದ ರೇಷ್ಮೆ ಬೆಳೆ; ಕಾಡದ ಕೃಷಿ ಕಾರ್ಮಿಕರ ಕೊರತೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 4:10 IST
Last Updated 14 ನವೆಂಬರ್ 2025, 4:10 IST
ರೇಷ್ಮೆ ಸಾಕಣೆ ಕೇಂದ್ರದಲ್ಲಿ ರೇಷ್ಮೆ ಬೆಳೆ ತೆಗೆದ ನಂತರ ಉಳಿದ‌ ರೇಷ್ಮೆ ಕಟ್ಟಿಗೆ ಹಾಗೂ ಗೂಡುಗಳನ್ನು ನೋಡುತ್ತಿರುವ ರೈತ ಶಿವಪ್ಪ ಘಂಟಿ
ರೇಷ್ಮೆ ಸಾಕಣೆ ಕೇಂದ್ರದಲ್ಲಿ ರೇಷ್ಮೆ ಬೆಳೆ ತೆಗೆದ ನಂತರ ಉಳಿದ‌ ರೇಷ್ಮೆ ಕಟ್ಟಿಗೆ ಹಾಗೂ ಗೂಡುಗಳನ್ನು ನೋಡುತ್ತಿರುವ ರೈತ ಶಿವಪ್ಪ ಘಂಟಿ   

ಶಿರಹಟ್ಟಿ: ಮಣ್ಣು ನಂಬಿ ಬಂಡವಾಳ ಹಾಕಿದರೆ ಭೂತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆಯಿಂದ ಶ್ರಮವಹಿಸಿ ದುಡಿದು ಯಶಸ್ವಿಯಾದ ಕುರಿಗಾಹಿ ರೈತರಾದ ಮುದಕಪ್ಪ ಘಂಟಿ, ಶಿವಪ್ಪ ಘಂಟಿ, ರೇವಣಸಿದ್ದಪ್ಪ ಘಂಟಿ ರೇಷ್ಮೆ ಬೆಳೆಯಲ್ಲಿ ಅತ್ಯಧಿಕ ಲಾಭ ಗಳಿಸುವುದರೊಂದಿಗೆ ತಾಲ್ಲೂಕಿನಲ್ಲಿಯೇ ಮಾದರಿ ರೈತ ಸಹೋದರರು ಎನಿಸಿಕೊಂಡಿದ್ದಾರೆ.

ತಾಲ್ಲೂಕಿನ ವರವಿ ತಾಂಡಾದ ನಿವಾಸಿಗಳಾದ ಇವರು ವರವಿ ಗ್ರಾಮದ ಸುತ್ತಲೂ 7 ಎಕರೆ ನೀರಾವರಿ ಜಮೀನು ಹೊಂದಿದ್ದು,  5 ಎಕರೆಯಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಅಲ್ಲದೇ 25 ಎಕರೆ ಒಣ ಬೇಸಾಯದ ಜಮೀನು ಹೊಂದಿದ್ದಾರೆ. ತೋಟದಲ್ಲಿ 3 ಕೊಳವೆಬಾವಿ ಇದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೀರಿನ ನಿರ್ವಹಣೆಯಿಂದಲೇ ಅವರಿಗೆ ಉತ್ತಮ ಇಳುವರಿ ಮತ್ತು ಆದಾಯ ಬರುತ್ತಿದೆ.

ರೇಷ್ಮೆಯನ್ನು ಮುಖ್ಯ ಬೆಳೆಯನ್ನಾಗಿಸಿಕೊಂಡ ಅವರು, ಇಡೀ ವರ್ಷ ರೇಷ್ಮೆ ಬೆಳೆ ಬರುವ ಹಾಗೆ ಯೋಜನೆ ರೂಪಿಸಿ ಐದು ಎಕರೆಯಲ್ಲಿ ಪ್ರತ್ಯೇಕ ಫ್ಲಾಟ್ ಮಾಡಿಕೊಂಡಿದ್ದು, ವರ್ಷ ಪೂರ್ತಿ ತೋಟದಲ್ಲಿ ರೇಷ್ಮೆ ಗೂಡುಗಳ ಉತ್ಪಾದನೆ ಇರುತ್ತದೆ. ರೇಷ್ಮೆ ಬೆಳೆಗೆ ವರ್ಷಕ್ಕೆ ಸುಮಾರು 20 ಗಾಡಿ ಸಗಣಿ ಗೊಬ್ಬರ ಹಾಕುತ್ತಿದ್ದು, 10 ಗಾಡಿ ಗೊಬ್ಬರ ತಮ್ಮ ಜಾನುವಾರುಗಳಿಂದ ಉತ್ಪಾದನೆಯಾಗುತ್ತಿದೆ. ಉಳಿದ 10 ಗಾಡಿ ಗೊಬ್ಬರವನ್ನು ಇತರೆ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಸುಮಾರು 5 ವರ್ಷಗಳಿಂದ ರೇಷ್ಮೆ ಕೃಷಿ ಮಾಡಿಕೊಂಡು ಬರುತ್ತಿರುವ ಅವರು ಪ್ರತಿ ಬಾರಿ 2 ಕ್ವಿಂಟಲ್ ಇಳುವರಿ ಪಡೆಯುತ್ತಾರೆ. ಪಟ್ಟಣದಲ್ಲಿ ರೇಷ್ಮೆ ವಹಿವಾಟು ನಡೆಯುವುದರಿಂದ ಹೆಚ್ಚಿನ ಲಾಭ ಕೈಸೇರುತ್ತಿದೆ.

ADVERTISEMENT

ಹಿಪ್ಪುನೇರಳೆ ಬೆಳೆಗೆ ಒತ್ತು ನೀಡುತ್ತಿರುವ ಅವರು ಹೆಚ್ಚು ಹಸಿರೆಲೆ ಗೊಬ್ಬರ, ತಿಪ್ಪೆ ಗೊಬ್ಬರ ಬಳಸಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ಹುಳು ಸಾಕಣೆ ಘಟಕದಲ್ಲಿ ಸದಾ ಗಾಳಿಯಾಡುವಂತೆ ವ್ಯವಸ್ಥೆ ಮಾಡಿದ್ದು, ಸೊಳ್ಳೆ ಅಥವಾ ನೊಣ ಸುಳಿಯದ ರೀತಿಯಲ್ಲಿ ಪರದೆ ಕಟ್ಟಿದ್ದಾರೆ. ಘಟಕವನ್ನು ಹೆಚ್ಚು ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಹಾಗೂ ಬೇಗ ಇಳುವರಿ ಪಡೆಯಬಹುದು ಎಂಬುದು ಅವರ ಅನುಭವದ ಮಾತು.

ತಮ್ಮ ಹೊಲದಲ್ಲಿ ಬೆಳೆದ ರೇಷ್ಮೆ ಬೆಳೆಯಲ್ಲಿ ರೈತ ಶಿವಪ್ಪ ರೇಷ್ಮೆ ಇಲಾಖೆಯ ಸಿಬ್ಬಂದಿಯೊಂದಿಗೆ.
ನಾವು ಅಣ್ಣಾತಮ್ಮಾ ಎಲ್ಲಾರೂ ಕೂಡೆ ಇರ್ತಿವಿ. ನಾವೆಲ್ಲಾರೂ ಹೊಲ್ದಾಗ ಕೆಲ್ಸಾ ಮಾಡೋದ್ರಿಂದ ನಮ್ಗ ಆಳಿಂದ ಅವಶ್ಯಕತಿ ಇಲ್ಲ. ನಮ್ಮ ಕೆಲ್ಸಾ ನಾವಾ ಮಾಡ್ಕೊತಿವ್ರಿ.
ಶಿವಪ್ಪ ಘಂಟಿ, ರೈತ
ವರ್ಷಕ್ಕೆ 10 ಬೆಳೆ: ಲಕ್ಷಾಂತರ ಆದಾಯ
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ ₹700ರಿಂದ ₹800 ದರ ಇದೆ. ಒಂದು ವರ್ಷದಲ್ಲಿ 8 ರಿಂದ 10 ಬೆಳೆಗಳನ್ನು ತೆಗೆಯುವ ಘಂಟಿ ಸಹೋದರರು ವರ್ಷಕ್ಕೆ ಸುಮಾರು ₹10 ಲಕ್ಷದಿಂದ ₹12 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ವರ್ಷದಲ್ಲಿ ₹1.5 ಲಕ್ಷ ಖರ್ಚು ತೆಗೆದು ಬರೊಬ್ಬರಿ ₹10 ಲಕ್ಷ ನಿವ್ವಳ ಲಾಭವನ್ನು ರೇಷ್ಮೆಯೊಂದರಲ್ಲಿಯೇ ತೆಗೆಯುತ್ತಾರೆ. ಇದರ ಜೊತೆಗೆ ತೋಟದಲ್ಲಿನ ಇತರೆ ಹಾಗೂ ಒಣ ಬೇಸಾಯದ ಜಮೀನಿನಲ್ಲಿ ಬೆಳೆಯಲಾದ ಗೋವಿನಜೋಳ ಹೆಸರು ಶೇಂಗಾ ಸೇರಿದಂತೆ ಇತರೆ ಬೆಳೆಗಳಿಂದ ಸುಮಾರು ₹2 ಲಕ್ಷದಿಂದ ₹3 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಕೃಷಿಯೊಂದಿಗೆ ಕುರಿ ಎಮ್ಮೆ ಸಾಕಣೆ
ರೇಷ್ಮೆ ಕೃಷಿಯೊಂದಿಗೆ ಎಮ್ಮೆ ಹಾಗೂ ಕುರಿ ಸಾಕಣೆ ಮಾಡುತ್ತಿರುವ ರೈತ ಸಹೋದರರು ಅದರಲ್ಲೂ ಲಾಭದಲ್ಲಿದ್ದಾರೆ. ಸುಮಾರು 25 ಕುರಿ ಹಾಗೂ 5 ಎಮ್ಮೆಗಳನ್ನು ಸಾಕಣೆ ಮಾಡುತ್ತಿದ್ದಾರೆ. ಒಂದು ಕುರಿಯನ್ನು ₹8 ಸಾವಿರದಿಂದ  ₹10 ಸಾವಿರಕ್ಕೆ ಮಾರಾಟ ಮಾಡುತ್ತಾರೆ. ಇವರಿಗೆ ಮೇವಿನ ಕೊರತೆ ತಲೆದೋರಿಲ್ಲ. ಅಲ್ಲದೇ ಕುರಿ ಹಾಗೂ ಎಮ್ಮೆಯ ಸಗಣಿ ಗೊಬ್ಬರದಿಂದ ರೇಷ್ಮೆ ಬೆಳೆ ಸಮೃದ್ಧವಾಗಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.