ADVERTISEMENT

ಶಿರಹಟ್ಟಿ: ರೇಷ್ಮೆ ಕೃಷಿಯಲ್ಲಿ ನೆಮ್ಮದಿ ಕಂಡ ಫಕೀರೇಶ

ವರ್ಷದಲ್ಲಿ 8ರಿಂದ 10 ಬೆಳೆ: ₹10 ಲಕ್ಷದಿಂದ ₹15 ಲಕ್ಷ ಆದಾಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:09 IST
Last Updated 8 ಆಗಸ್ಟ್ 2025, 5:09 IST
ರೇಷ್ಮೆ ಹುಳುವಿನ ನಿರ್ವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತ ಫಕೀರೇಶ ಮುರಾರಿ
ರೇಷ್ಮೆ ಹುಳುವಿನ ನಿರ್ವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತ ಫಕೀರೇಶ ಮುರಾರಿ   

ಶಿರಹಟ್ಟಿ: ಮಣ್ಣು ನಂಬಿ ಬಂಡವಾಳ ಹಾಕಿದರೆ ಭೂತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆಯಿಂದ ಶ್ರಮವಹಿಸಿ ದುಡಿದು ಯಶಸ್ವಿಯಾದ ರೈತ ಫಕೀರೇಶ ಮುರಾರಿ ರೇಷ್ಮೆ ಬೆಳೆಯಲ್ಲಿ ಅಧಿಕ ಲಾಭ ಗಳಿಸುವುದರೊಂದಿಗೆ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ 3 ಎಕರೆ ತೋಟದಲ್ಲಿ ರೇಷ್ಮೆ ಬೆಳೆ ಬೆಳೆಯುತ್ತಿದ್ದು, ಕೊಳವೆಬಾವಿ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೀರಿನ ನಿರ್ವಹಣೆಯಿಂದಲೇ ಅವರಿಗೆ ಉತ್ತಮ ಇಳುವರಿ ಮತ್ತು ಆದಾಯ ಬರುತ್ತಿದೆ. ಅಲ್ಲದೇ, ಇತರೆ ರೈತರ ಸುಮಾರು 8 ಎಕರೆ ರೇಷ್ಮೆ ತೋಟವನ್ನು ಸಹ ಇವರೇ ನಿರ್ವಹಿಸುತ್ತಿದ್ದು, ಉತ್ತಮ ಇಳುವರಿಯೊಂದಿಗೆ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.

ಇಡೀ ವರ್ಷ ರೇಷ್ಮೆ ಬೆಳೆ ಬರುವ ಹಾಗೆ ಯೋಜನೆ ರೂಪಿಸಿ ಪ್ರತ್ಯೇಕ ಫ್ಲಾಟ್ ಮಾಡಿಕೊಂಡಿದ್ದು, ವರ್ಷ ಪೂರ್ತಿ ತೋಟದಲ್ಲಿ ರೇಷ್ಮೆ ಗೂಡುಗಳ ಉತ್ಪಾದನೆ ಇರುತ್ತದೆ. ದಶಕಗಳಿಂದ ರೇಷ್ಮೆ ಕೃಷಿ ಮಾಡಿಕೊಂಡು ಬರುತ್ತಿರುವ ಅವರು ಪ್ರತಿ ಬಾರಿ 2 ಕ್ವಿಂಟಲ್ ಇಳುವರಿ ಪಡೆಯುತ್ತಾರೆ. ಪಟ್ಟಣದಲ್ಲಿ ರೇಷ್ಮೆ ವಹಿವಾಟು ನಡೆಯುವುದರಿಂದ ಹೆಚ್ಚಿನ ಲಾಭ ಕೈಸೇರುತ್ತಿದೆ. ದರದಲ್ಲಿ ಹೆಚ್ಚು ಕಡಿಮೆಯಾದರೆ ರಾಮನಗರ ಮಾರುಕಟ್ಟೆಗೂ ರೇಷ್ಮೆಗೂಡನ್ನು ತೆಗೆದುಕೊಂಡು ಹೋಗುತ್ತಾರೆ.

ADVERTISEMENT

ರೇಷ್ಮೆ ಹುಳುವಿನ ನಿರ್ವಹಣೆ: ಹಿಪ್ಪು ನೇರಳೆ ಬೆಳೆಗೆ ಒತ್ತು ನೀಡುತ್ತಿರುವ ಅವರು ಹೆಚ್ಚು ಹಸಿರೆಲೆ ಗೊಬ್ಬರ, ತಿಪ್ಪೆ ಗೊಬ್ಬರ ಬಳಸಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ಹುಳು ಸಾಕಾಣಿಕೆ ಘಟಕದಲ್ಲಿ ಸದಾ ಗಾಳಿಯಾಡುವಂತೆ ವ್ಯವಸ್ಥೆ ಮಾಡಿದ್ದು, ಸೊಳ್ಳೆ ಅಥವಾ ನೊಣವು ಸುಳಿಯದ ಹಾಗೆ ಪರದೆ ಕಟ್ಟಿದ್ದಾರೆ. ಘಟಕವನ್ನು ಹೆಚ್ಚು ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಹಾಗೂ ಬೇಗ ಇಳುವರಿ ಪಡೆಯಬಹುದು ಎಂಬುದು ಅವರ ಅನುಭವದ ಮಾತು.

ವರ್ಷಕ್ಕೆ 10 ಬೆಳೆ: ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹600 ದರ ಇದೆ. ಒಂದು ವರ್ಷದಲ್ಲಿ 8ರಿಂದ 10 ಬೆಳೆಗಳನ್ನು ತೆಗೆಯುವ ಫಕೀರೇಶ ವರ್ಷಕ್ಕೆ ಸುಮಾರು ₹10 ಲಕ್ಷದಿಂದ ₹15 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ವಾರ್ಷಿಕ ₹5 ಲಕ್ಷ ಖರ್ಚು ಬರುತ್ತದೆ. ಇದರ ಹೊರತಾಗಿ ಒಣ ಬೇಸಾಯದಲ್ಲಿ ಶೇಂಗಾ ಹಾಗೂ ಗೋವಿನಜೋಳ ಬೆಳೆಯುತ್ತಿದ್ದಾರೆ. ಪ್ರಸ್ತುತ 2 ಎಕರೆ ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಯುತ್ತಿದ್ದು ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಪಾಪ್ ಕಾರ್ನ್ ಮೆಕ್ಕೆಜೋಳ ಬೆಳೆಯೊಂದಿಗೆ ರೈತ ಫಕೀರೇಶ
ತೋಟದಲ್ಲಿ ಕಾಯಂ ಆಗಿ 8 ಆಳುಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಹೆಚ್ಚಿನ ಆಳು ಹಾಗೂ ಹಣ ಕೊಟ್ಟು ಕೆಲಸಕ್ಕೆ ಹಚ್ಚಲಾಗುವುದು
ಫಕೀರೇಶ ಮುರಾರಿ ರೈತ

ಕೃಷಿಯೊಂದಿಗೆ ಹಸು ಸಾಕಾಣಿಕೆ:

ರೇಷ್ಮೆ ಕೃಷಿಯೊಂದಿಗೆ ಹಸು ಮತ್ತು ಹೋರಿಗಳನ್ನು ಸಾಕಾಣಿಕೆ ಮಾಡುತ್ತಿರುವ ರೈತ ಫಕೀರೇಶ ಅವರು ಅದರಲ್ಲೂ ಲಾಭದಲ್ಲಿದ್ದಾರೆ. ಅಪ್ಪಟ ದೇಸಿತಳಿಯ ಹಸುಗಳನ್ನು ಸಾಕುತ್ತಿದ್ದು ಹೈನುಗಾರಿಕೆಗೆ ಒತ್ತು ನೀಡಿ ಹಸುವಿನ ಹಾಲನ್ನು ಡೇರಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ರಾಸಾಯನಿಕ ಗೊಬ್ಬರದ ಗೋಜಿಗೆ ಹೋಗದೆ ಈ ಹಸು ಮತ್ತು ಹೋರಿಗಳಿಂದ ಬರುವ ಸೆಗಣಿ ಗೊಬ್ಬರವನ್ನು ತಮ್ಮ ತೋಟದಲ್ಲಿಯೇ ಬಳಸುತ್ತಾರೆ. ತೋಟದಲ್ಲಿ ರೇಷ್ಮೆ ಸೊಪ್ಪು ಹೇರಳವಾಗಿರುವುದರಿಂದ ಮೇವಿನ ಕೊರತೆ ತಲೆದೋರುವುದಿಲ್ಲ. ಇಂತಹ ಅಪ್ಪಟ ದೇಸಿ ದನಗಳ ಸೆಗಣಿ ಗೊಬ್ಬರವನ್ನು ಸಸಿಗಳಿಗೆ ಹಾಕುವುದರಿಂದ ಸಸಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಸಮೃದ್ಧ ಬೆಳೆ ಬರುತ್ತದೆ ಎಂಬುದು ಅವರ ಅನುಭವದ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.