
ಗದಗ: ರಾಜ್ಯ ಸರ್ಕಾರ ಬಳ್ಳಾರಿ ಪೊಲೀಸರಿಗೊಂದು ನ್ಯಾಯ; ಗದಗ ಜಿಲ್ಲೆಯ ಪೊಲೀಸರಿಗೊಂದು ನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಆರೋಪಿಸಿದರು.
ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ವೈಫಲ್ಯ ಕಂಡಿದೆ ಹಾಗೂ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಗದಗ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲ, ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತದ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ಕೆಲವೆಡೆ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಕೆಲವೆಡೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಂತೆ ನಾಟಕವಾಡಿ, ತನ್ನ ವೈಫಲ್ಯ ಮರೆ ಮಾಚುತ್ತಿದೆ’ ಎಂದು ಆರೋಪಿಸಿದರು.
‘ಗಣಿನಾಡು ಬಳ್ಳಾರಿ ಪ್ರಕರಣದಲ್ಲಿ ಎಸ್ಪಿಯನ್ನು ಅಮಾನತುಗೊಳಿಸಿ, ಬಳ್ಳಾರಿ ಶಾಸಕ ನಾ.ರಾ. ಭರತ್ರೆಡ್ಡಿ ಅವರನ್ನು ಸಂತುಷ್ಟಗೊಳಿಸಲು ಸರ್ಕಾರ ಪ್ರಯತ್ನಿಸಿದೆ’ ಎಂದು ಆರೋಪಿಸಿದರು.
‘ಶಿರಹಟ್ಟಿ ಠಾಣೆಯ ಪಿಎಸ್ಐ ಈರಣ್ಣ ರಿತ್ತಿ ಪರಿಶಿಷ್ಟ ಜಾತಿಯ ರೈತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ₹32 ಸಾವಿರ ಲೂಟಿ ಮಾಡಿದ್ದಾರೆ’ ಎಂದು ಆರೋಪ ಮಾಡಿದ ಅವರು, ‘ಸರ್ಕಾರ ಕೂಡಲೇ ಅವರನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹೇಶ್ ರೋಖಡೆ, ಹುಲಿಗೆಪ್ಪ ವಾಲ್ಮೀಕಿ, ಬಸವರಾಜ್ ಕುರ್ತಕೋಟಿ, ಈಶ್ವರ್ ಕಾಟವಾ, ಕುಮಾರ್ ನಡಗೇರಿ, ವೆಂಕಟೇಶ್ ದೊಡ್ಡಮನಿ, ಭರತ ಲದ್ದಿ, ಈರಣ್ಣ ಪೂಜಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.