
ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಎಸ್.ಎಫ್.ಐ. ನೇತೃತ್ವದಲ್ಲಿ ಈಚೆಗೆ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಎಸ್.ಎಫ್.ಐ ಮುಖಂಡ ಚಂದ್ರು ರಾಠೋಡ ಮಾತನಾಡಿ, ‘ಪರಿಕ್ಷೆ ದಿನಾಂಕ ನಿಗದಿಯಾದರೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕ ವಿತರಿಸಿಲ್ಲ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿಲ್ಲ. ಸಾಬೂನು ಕಿಟ್, ಸಮವಸ್ತ್ರ, ಮಂಚ ಹಾಗೂ ಹಾಸಿಗೆ ಒದಗಿಸಿಲ್ಲ. ವಿದ್ಯುತ್ ಸ್ವಿಚ್ ಹಾಗೂ ಫ್ಯಾನ್ ದುರಸ್ತಿ ಮಾಡಿಸಿಲ್ಲ’ ಎಂದು ಆರೋಪಿಸಿದರು.
‘ವಸತಿನಿಲಯದ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಕರ್ಯ ಒದಗಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿಯಾಘಿದೆ. ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯು ಕ್ರೈಸ್ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸೌಲಭ್ಯ ಕಲ್ಪಿಸದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಎಸ್.ಎಫ್.ಐ.ನ ಗಣೇಶ ರಾಠೋಡ, ಅನಿಲ ರಾಠೋಡ, ವಿದ್ಯಾರ್ಥಿಗಳಾದ ಭೂಮಿಕಾ ಬನ್ನೀಗಿಡದ, ಭಾಗ್ಯ ಗೂಗಲೋತ್ತರ, ಶ್ವೇತ, ಜ್ಯೋತಿ, ಅಶ್ವಿನಿ, ಯಶೋಧ, ಕವಿತಾ, ವೀಣಾ, ಮೇಘಾ, ರಾಕೇಶ್, ಫಕೀರಗೌಡ, ರಾಜೇಶ, ರವಿ ಇದ್ದರು.
15 ದಿನಗಳ ಗಡುವು
ಸ್ಥಳಕ್ಕೆ ಆಗಮಿಸಿದ ಶಾಲೆಯ ಮುಖ್ಯಶಿಕ್ಷಕ ಬಸವರಾಜ ತುಮ್ಮರಗುದ್ದಿ ಮಾತನಾಡಿ ‘ಇಲ್ಲಿನ ಸಮಸ್ಯೆ ಸರ್ಕಾರ ಮಟ್ಟದಲ್ಲಿದೆ’ ಎಂದರು. ಪ್ರತಿಭಟನಕಾರರು ಪಟ್ಟುಬಿಡದೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು. ಮುಖ್ಯಶಿಕ್ಷಕ ಹಾಗೂ ನಿಲಯ ಪಾಲಕ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ 15 ದಿನಗಳ ಗಡುವು ಪಡೆದಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.