ADVERTISEMENT

ಹಿಜಾಬ್ ತೀರ್ಪು ಸ್ವಾಗತಿಸಿದ ನಟಿ ತಾರಾ ಅನೂರಾಧಾ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 16:15 IST
Last Updated 15 ಮಾರ್ಚ್ 2022, 16:15 IST
ತಾರಾ
ತಾರಾ    

ಗದಗ: ಹಿಜಾಬ್‌– ಕೇಸರಿ ಶಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪು ನ್ಯಾಯಯುತವಾಗಿದೆ ಎಂದು ಹಿರಿಯ ನಟಿ ತಾರಾ ಅನೂರಾಧಾ ಹೇಳಿದರು.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನಮ್ಮ ನಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿ ಪಾಲನೆ ಮಾಡುವುದರಲ್ಲಿ ತಪ್ಪಿಲ್ಲ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ದೇಶ ನಮ್ಮದು. ಆದರೆ, ಶಾಲೆ ಅಂದ ಮೇಲೆ ಸಮವಸ್ತ್ರ ಇರಬೇಕು. ಸಮವಸ್ತ್ರ ಸಮಾನತೆಯ ಪ್ರತೀಕ. ಬಡವ, ಶ್ರೀಮಂತ, ಜಾತಿ ಮತ ಎಂಬ ಭೇದ ಭಾವ ಇಲ್ಲದೇ ಎಲ್ಲರೂ ಒಟ್ಟಾಗಿ ಕಲಿಯುವ ಸ್ಥಳ ಶಾಲೆ ಎಂದು ಹೇಳಿದರು.

‘ದಿ ಕಾಶ್ಮೀರ ಫೈಲ್ಸ್‌’ ಸಿನಿಮಾ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಿನಿಮಾವೆಂಬುದು ಸಮಗ್ರ ಕಲೆ. ಸಾಹಸ, ಸಂಗೀತ, ನೃತ್ಯ ಸೇರಿದಾಗ ಸಿನಿಮಾ ಆಗುತ್ತದೆ. ಎಲ್ಲರನ್ನ ಒಟ್ಟುಗೂಡಿಸುವ ಶಕ್ತಿ ಸಿನಿಮಾಗೆ ಇದೆ. ಇದು ರಾಜಕೀಯ ಸಿನಿಮಾ ಅಲ್ಲಾ. ಸತ್ಯಘಟನೆ ಆಧರಿತ ಸಿನಿಮಾ.ಹಾಗಾಗಿ, ಸಿನಿಮಾದೊಂದಿಗೆ ರಾಜಕೀಯ ಬೆರೆಸಬಾರದು ಎಂದು ಹೇಳಿದರು.

ADVERTISEMENT

‘ದಿ ಕಾಶ್ಮೀರ ಫೈಲ್ಸ್‌’ ಸಿನಿಮಾ ನೋಡಿದ್ದೇನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಸಿನಿಮಾ ನೋಡಿದಾಗ ಮೈ ಜುಂ ಎನ್ನಿಸಿತು. ಒಂದು ರೀತಿಯ ಆಕ್ರೋಶ, ದುಃಖ ಒತ್ತರಿಸಿ ಬಂತು’ ಎಂದು ಹೇಳಿದರು.

ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಚಿತ್ರ ‘ಜೇಮ್ಸ್‌’ ಕುರಿತು ಮಾತನಾಡಿದ ಅವರು, ‘ಮಾರ್ಚ್‌ 17ರಂದು ಪುನೀತ್‌ ಮತ್ತೊಮ್ಮೆ ನಮ್ಮ ಜೊತೆಗೆ ಇರುತ್ತಾರೆ. ಈ ಚಿತ್ರವನ್ನು ಪುನೀತ್ ಅವರ ಕೊನೆಯ ಸಿನಿಮಾ ಅಂತ ಹೇಳಲಿಕ್ಕೆ ಇಷ್ಟ ಇಲ್ಲ. ಕಲಾವಿದನಿಗೆ ಸಾವಿಲ್ಲ. ಅವರ ಕೆಲಸ ಅವರನ್ನು ಸದಾ ಜೀವಂತವಾಗಿರಿಸುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.