ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಗಜೇಂದ್ರಗಡ: ‘ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಂಜೀವಿನಿಯಾಗಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯ ಸರ್ಕಾರ ಮುಚ್ಚುವ ಆದೇಶ ಮಾಡುವ ಮೂಲಕ ಅತ್ಯಂತ ಕೆಳಮಟ್ಟದ ರಾಜಕೀಯ ಮಾಡುತ್ತಿದೆ’ ಎಂದು ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪೂರ ರಾಜ್ಯಸರ್ಕಾರದ ವಿರುದ್ದ ಹರಿಹಾಯ್ದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಬಿಜೆಪಿ ರೋಣ ಮಂಡಲ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿನ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕೈಗೆ ಕಪ್ಪುಪಟ್ಟಿ ಧರಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಜನೌಷಧ ಕೇಂದ್ರದ ಮುಂದೆ ಪ್ರಧಾನಮಂತ್ರಿ ಅವರ ಚಿತ್ರ ಇರುತ್ತದೆ ಎಂಬ ಕಾರಣಕ್ಕೆ ರಾಜ್ಯಾದಾದ್ಯಂತ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ಮುಂದಾಗಿದೆ. ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಕೆ ಮಾಡುತ್ತಿರುವ ಯೋಜನೆ ಬಂದ್ ಮಾಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಉಗ್ರವಾಗಿ ಪ್ರತಿಭಟಿಸಲಾಗುವುದು’ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿ, ‘ರಾಜ್ಯ ಸರ್ಕಾರ ಖಾಸಗಿ ಔಷಧಿ ಮಾಫಿಯಾಗೆ ಮಣಿದು ಜನೌಷಧ ಕೇಂದ್ರಗಳನ್ನು ಮುಚ್ಚಿಸಲು ಮುಂದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬಡವರಿಗೆ ನೀಡುತ್ತಿರುವ ಯೋಜನೆಗಳ ವಿರುದ್ದ ದ್ವೇಷ ಸಾಧಿಸುತ್ತಿದೆ’ ಎಂದರು.
ಒಂದು ಗಂಟೆ ಮೌನ ಪ್ರತಿಭಟನೆ ನಡೆಸಿದರು. ಮುಖಂಡರಾದ ಬಿ.ಎಂ. ಸಜ್ಜನರ, ಅಶೋಕ ನವಲಗುಂದ, ಮುತ್ತಣ್ಣ ಕಡಗದ, ಅಶೋಕ ವನ್ನಾಲ, ಮಹಾಂತೇಶ ಪೂಜಾರ, ಬಾಳಾಜಿರಾವ್ ಭೋಸಲೆ, ಶಿವಾನಂದ ಮಠದ, ಭಾಸ್ಕರಸಾ ರಾಯಬಾಗಿ, ರಮೇಶ ವಕ್ಕರ, ಡಿ.ಜಿ. ಕಟ್ಟಿಮನಿ, ಯಮನಪ್ಪ ತಿರಕೋಜಿ, ಬುಡ್ಡಪ್ಪ ಮೂಲಿಮನಿ, ಅಂದಪ್ಪ ಅಂಗಡಿ, ಮೂಕಪ್ಪ ನಿಡಗುಂದಿ, ಯು.ಆರ್.ಚನ್ನಮ್ಮನವರ, ಹನಮಂತರಾವ ಚವ್ಹಾಣ, ರವಿ ಶಿಂಗ್ರಿ, ಮುದಿಯಪ್ಪ ಕರಡಿ, ಸೂಗಿರಪ್ಪ ಕಾಜಗಾರ, ಶಿವಕುಮಾರ ಜಾಧವ, ಶಂಕರ ಇಟಗಿ, ಸಂಜೀವಪ್ಪ ಲೆಕ್ಕಿಹಾಳ, ಮುತ್ತಯ್ಯ ಬಾಳಿಕಾಯಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.