ADVERTISEMENT

ಗಜೇಂದ್ರಗಡ | ಮೀಸಲಾತಿ ಸಿಗುವವರೆಗೆ ಹೋರಾಟ ನಿರಂತರ

ಪೂರ್ವಭಾವಿ ಸಭೆ: ಬಸವ ಜಯಮೃತ್ಯುಂಜಯ ಶ್ರೀ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 14:00 IST
Last Updated 25 ಅಕ್ಟೋಬರ್ 2023, 14:00 IST
ಗಜೇಂದ್ರಗಡದ ಜಿ.ಕೆ.ಬಂಡಿ ಗಾರ್ಡ್‌ನ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು
ಗಜೇಂದ್ರಗಡದ ಜಿ.ಕೆ.ಬಂಡಿ ಗಾರ್ಡ್‌ನ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು   

ಗಜೇಂದ್ರಗಡ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಆರಂಭಿಸಿರುವ ಹೋರಾಟ ಮೀಸಲಾತಿ ಪಡೆಯುವವರೆಗೂ ನಿಲ್ಲಿಸುವದಿಲ್ಲ’ ಎಂದು ಕೂಡಲ ಸಂಗಮದ ಬಸಯ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಿ.ಕೆ.ಬಂಡಿ ಗಾರ್ಡನ್‌ನಲ್ಲಿ ಬುಧವಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಅ.30ರಂದು ಜಿಲ್ಲೆಯ ಅಸುಂಡಿ ಕ್ರಾಸ್‌ನಲ್ಲಿ ನಡೆಯಲಿರುವ ಸಾಮೂಹಿಕ ಲಿಂಗಪೂಜೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೀಸಲಾತಿ ಕುರಿತು ಮಾತನಾಡಿದಾಗ ಬಜೆಟ್ ಅಧಿವೇಶನದ ವರೆಗೆ ಸಮಯ ನೀಡಿ ಎಂದಿದ್ದರು. ಬಜೆಟ್ ಅಧಿವೇಶನ ಮುಗಿದು 4 ತಿಂಗಳು ಗತಿಸಿದರೂ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಯತ್ತ ಗಮನ ಹರಿಸುತ್ತಿಲ್ಲ. ಅವರಿಗೆ ಮತ್ತೆ ಭೇಟಿಯಾದರೆ ದೀಪಾವಳಿ, ಸಂಕ್ರಾಂತಿ ಇಲ್ಲವೇ ಲೋಕಸಭಾ ಚುನಾವಣೆ ಮುಗಿಯಲಿ ಎನ್ನಬಹುದು. ಹೀಗಾಗಿ ಲೋಕಸಭಾ ಚುನಾವಣೆ ನಡೆಯುವ ಒಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸೋಣ’ ಎಂದರು.

ADVERTISEMENT

‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹಾಲುಮತ ಸಮುದಾಯ ಎಸ್‌.ಟಿಗೆ ಹಾಗೂ ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿರುವುದು ಸಂತಸ ತಂದಿದೆ. ನಮಗೂ ಸಹ ರಾಜ್ಯದಲ್ಲಿ 2ಎ ಹಾಗೂ ಕೇಂದ್ರದಲ್ಲಿ ಒಬಿಸಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದೇವೆಯೇ ಹೊರತು ನಾವು ಯಾರ ವಿರುದ್ಧ ಅಥವಾ ಮತ್ತೊಬ್ಬರ ಹಕ್ಕನ್ನು ಕಸಿದಿಕೊಳ್ಳಲು ಹೋರಾಟ ನಡೆಸುತ್ತಿಲ್ಲ’ ಎಂದರು.

‘ರಾಜ್ಯ ಸರ್ಕಾರದಲ್ಲಿರುವ ನಮ್ಮ ಸಮಾಜದ ಇಬ್ಬರು ಮಂತ್ರಿಗಳು ಸೇರಿ 11 ಶಾಸಕರು ವಿಧಾನ ಸಭೆಯಲ್ಲಿ ಗುಡುಗಿದರೆ ನಮ್ಮ ಬೇಡಿಕೆ ಶೇ100ರಷ್ಟು ಈಡೇರುವ ವಿಶ್ವಾಸವಿದೆ. ಹೀಗಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.4 ರಿಂದ ಡಿ.15ರ ವರೆಗೆ ನಡೆಯಲಿರುವ ಅಧಿವೇಶನ ಆರಂಭಕ್ಕೂ ಮುನ್ನವೆ ನಮ್ಮ ಬೇಡಿಕೆ ಈಡೇರಿಸಬೇಕೆಂದು ಜಿಲ್ಲೆಯಲ್ಲಿ ಲಿಂಗಪೂಜೆ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸೋಣ’ ಎಂದರು.

ಗಜೇಂದ್ರಗಡ- ಉಣಚಗೇರಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿದರು.  ಟಿ.ಎಸ್.ರಾಜೂರ, ಈಶಣ್ಣ ಮ್ಯಾಗೇರಿ, ಚಂಬಣ್ಣ ಚವಡಿ, ಕಳಕಪ್ಪ ಸಂಗನಾಳ, ಸುಭಾಸ ಮ್ಯಾಗೇರಿ, ಮುತ್ತಣ್ಣ ಮ್ಯಾಗೇರಿ, ವೀರೇಶ ಸಂಗಮದ, ಈರಣ್ಣ ಪಲ್ಲೇದ ಇದ್ದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ

ಲಿಂಗಪೂಜೆ ಮೂಲಕ ಮೀಸಲಾತಿಗೆ ಒತ್ತಾಯಿಸಲು ನಿರ್ಧಾರ ‘ಲೋಕಸಭೆ ಚುನಾವಣೆ ಒಳಗೆ ಮೀಸಲಾತಿ ನೀಡಿ’

ಯಾವುದೇ ಸರ್ಕಾರವಿರಲಿ ಅಥವಾ ನಮ್ಮ ಸಮುದಾಯವರೇ ಮುಖ್ಯಮಂತ್ರಿಯಾಗಿರಲಿ ನ್ಯಾಯ ಸಮ್ಮತವಾಗಿರುವ ನಮ್ಮ ಬೇಡಿಕೆಯಿಂದ ನಾವು ಹಿಂದೆ ಸರಿಯುವುದಿಲ್ಲ ಬಸಯ ಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.