ADVERTISEMENT

ಮುಂಡರಗಿ: ಸಿಡಿಲಿಗೆ ಮೂರು ಕುರಿ ಆಹುತಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 15:35 IST
Last Updated 20 ಏಪ್ರಿಲ್ 2024, 15:35 IST
ಮಳೆಯ ರಭಸಕ್ಕೆ ಮುಂಡರಗಿ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ನಗರದ ಮನೆಯೊಂದರ ಕಂಪೌಂಡಿನ ಮೇಲೆ ಮರ ಉರುಳಿತು
ಮಳೆಯ ರಭಸಕ್ಕೆ ಮುಂಡರಗಿ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ನಗರದ ಮನೆಯೊಂದರ ಕಂಪೌಂಡಿನ ಮೇಲೆ ಮರ ಉರುಳಿತು   

ಮುಂಡರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಶನಿವಾರ ಬೆಳಿಗ್ಗೆ ಭಾರಿ ಮಳೆ ಸುರಿಯಿತು. ಬೆಳಿಗ್ಗೆ ಆರು ಗಂಟೆಗೆ ಗುಡುಗು, ಸಿಡಿಲು ಹಾಗೂ ಭಾರಿ ಗಾಳಿಯೊಂದಿಗೆ ಆರಂಭವಾದ ಬಿರುಸು ಮಳೆಯು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರಭಸದಿಂದ ಸುರಿಯಿತು.

ಮಳೆಯ ರಭಸಕ್ಕೆ ಪಟ್ಟಣದ ಭೀಮಾಂಬಿಕಾ ಕಾಲೊನಿ, ಹೇಮರಡ್ಡಿ ಮಲ್ಲಮ್ಮ ನಗರ, ಕಡ್ಲಿಪೇಟೆ, ಎಸ್.ಎಸ್.ಪಾಟೀಲ ನಗರ, ಭಜಂತ್ರಿ ಓಣಿ, ಭೂಮರಡ್ಡಿ ಪ್ಲಾಟ್ ಮೊದಲಾದ ಭಾಗಗಳಲ್ಲಿ ಗಿಡ, ಮರಗಳು ಹಾಗೂ ಬೃಹತ್ ಟೊಂಗೆಗಳು ಧರೆಗುರುಳಿದವು.

ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಸೋಮಲಿಂಗಪ್ಪ ಹುಳಕಣ್ಣವರ ಎಂಬುವವರಿಗೆ ಸೇರಿದ ಮೂರು ಕುರಿಗಳು ಸಿಡಿಲಿಗೆ ಆಹುತಿಯಾದವು.

ADVERTISEMENT

ಮಳೆಯ ರಭಸಕ್ಕೆ ಪಟ್ಟಣದ ಬಹುತೇಕ ಚರಂಡಿಗಳೆಲ್ಲ ತುಂಬಿ ಹರಿದವು. ಹಲವು ತಿಂಗಳುಗಳಿಂದ ಹೂತು ಹೋಗಿದ್ದ ಪಟ್ಟಣದ ಮುಖ್ಯ ಮಾರುಕಟ್ಟೆ, ಅಂಬಾ ಭವಾನಿ ನಗರ ಮೊದಲಾದ ಭಾಗಗಳ ಚರಂಡಿಗಳಲ್ಲಿ ರಭಸವಾಗಿ ನೀರು ಹರಿದಿದ್ದರಿಂದ ಚರಂಡಿಯ ಗಲೀಜು ನೀರೆಲ್ಲ ರಸ್ತೆಯ ಮೇಲೆ ಹರಿಯಿತು.

ಪಟ್ಟಣದ ಬಹುತೇಕ ಭಾಗಗಳಲ್ಲಿ ಬಿರುಗಾಳಿಗೆ ಗಿಡ, ಮರಗಳು ಧರೆಗುರುಳಿದ್ದರಿಂದ ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12.30 ವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ತುಂಗಭದ್ರಾ ನದಿ ದಂಡೆಯ ಶಿಂಗಟಾಲೂರು, ಶೀರನಹಳ್ಳಿ, ಗಂಗಾಪೂರ ಮೊದಲಾದ ಭಾಗಗಳಲ್ಲಿ ರೈತರು ಭತ್ತದ ಒಕ್ಕಲು ಮಾಡಿ ಭತ್ತವನ್ನು ಒಣಗಿಸಲು ಹರಡಿದ್ದರು. ಧೀಡಿರ್ ಮಳೆಯ ಕಾರಣದಿಂದಾಗಿ ರೈತರು ಭತ್ತವನ್ನು ಸಂರಕ್ಷಿಸಿಕೊಳ್ಳಲು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.