ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ರಭಸದ ಮಳೆಗೆ ಕಿತ್ತುಹೋದ ಪುಟಗಾಂವ್ಬಡ್ನಿ ಗ್ರಾಮದ ರಸ್ತೆಯನ್ನು ಶಾಸಕ ಡಾ.ಚಂದ್ರು ಲಮಾಣಿ ಬುಧವಾರ ವೀಕ್ಷಿಸಿದರು.
ಗ್ರಾಮದ ಹಳ್ಳಕ್ಕೆ ಕಟ್ಟಲಾಗಿರುವ ಚೆಕ್ಡ್ಯಾಂ ತುಂಬಿ ಹೆಚ್ಚಾದ ನೀರು ಪಕ್ಕದ ಹೊಲಕ್ಕೆ ನುಗ್ಗಿ ರಭಸದಿಂದ ರಸ್ತೆಗೆ ಅಪ್ಪಳಿಸಿದ್ದರಿಂದ ಈ ರಸ್ತೆ ಕಿತ್ತು ಹಾಳಾಗಿದೆ. ಇದರಿಂದಾಗಿ ಪುಟಗಾಂವ್ಬಡ್ನಿ ಮತ್ತು ಆದರಹಳ್ಳಿ ಗ್ರಾಮಗಳ ಮಧ್ಯ ಸಂಪರ್ಕ ಬಂದ್ ಆಗಿದೆ. ಈ ಕುರಿತು ಬುಧವಾರ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಎಇಇ ಫಕ್ಕಿರೇಶ ತಿಮ್ಮಾಪುರ ಅವರಿಗೆ ರಕ್ಷಣ ರಸ್ತೆ ದುರಸ್ತಿ ಮಾಡಿಸಿ ಎರಡೂ ಗ್ರಾಮಗಳ ನಡುವೆ ಸಂಪರ್ಕ ಸಾಧಿಸಲು ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.
ಗ್ರಾಮಸ್ಥರು, ‘ಆದಷ್ಟು ಬೇಗನೇ ಹಾಳಾದ ರಸ್ತೆಯನ್ನು ರಿಪೇರಿ ಮಾಡಿಸಬೇಕು. ಆದರಹಳ್ಳಿ ದಾರಿಗುಂಟ ಪುಟಗಾಂವ್ಬಡ್ನಿ ಗ್ರಾಮದ ರೈತರ ನೂರಾರು ಎಕರೆ ಹೊಲಗಳು ಇವೆ. ಕಾರಣ ಸದ್ಯ ಬಿತ್ತನೆ ಮಾಡುವ ಸಮಯ. ಬೇಗನೆ ರಸ್ತೆ ದುರಸ್ತಿ ಮಾಡಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.