ನರಗುಂದ: ಶಿಕ್ಷಣ ಕಲಿಕೆ ನಮ್ಮ ಬದಲಾವಣೆಗೆ ಕಾರಣವಾಗಬೇಕು. ಜೀವನ ರೂಪಿತಗೊಳ್ಳಬೇಕು. ಆದ್ದರಿಂದ ಸಂಸ್ಕಾರವುಳ್ಳ ವ್ಯಕ್ತಿತ್ವ ರೂಪಿಸುವುದೇ ಶಿಕ್ಷಣದ ಗುರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್.ಬಿ. ಯಾದವಾಡ ಹೇಳಿದರು.
ಪಟ್ಟಣದ ಯಡಿಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬುಧ ಬಿ.ಇಡಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ಒಕ್ಕೂಟದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತರಗತಿ ಪಠ್ಯಕ್ರಮ ಅಭ್ಯಸಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ನಡೆಯಬೇಕು. ಅವುಗಳು ಪ್ರಶಿಕ್ಷಣಾರ್ಥಿಗಳನ್ನು ಅನುಭವ ಶಾಲಿಗಳನ್ನಾಗಿಸಿ ಉತ್ತಮ ನಾಗರಿಕರನ್ನಾಗಿ ಪರಿವರ್ತಿಸುತ್ತವೆ. ಸಮಕಾಲಿನ ಜಗತ್ತು ಸ್ಪರ್ಧಾತ್ಮಕತೆಯಿಂದ ಕೂಡಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜ್ಞಾನ ನೀಡುವುದರ ಮೂಲಕ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವಗಳನ್ನು ಬೆಳೆಸುವ ಬಹುದೊಡ್ಡ ಜವಾಬ್ದಾರಿ ಹೊಂದಿವೆ. ಪ್ರಶಿಕ್ಷಣಾರ್ಥಿಗಳು ತಮ್ಮ ಓದಿನ ಜೊತೆಗೆ ತನ್ನ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಶಿಕ್ಷಣಾರ್ಥಿಗಳ ಮೇಲೆ ಅಪಾರವಾದ ಜವಾಬ್ದಾರಿ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಬೈರನಹಟ್ಟಿಯ ದೊರೆ ಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಅಜ್ಜನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಭೂಗೋಳ ಶಾಸ್ತ್ರದಲ್ಲಿ ಪಿ.ಎಚ್ಡಿ ವ್ಯಾಸಂಗ ಕೈಗೊಂಡ ಮಂಜುನಾಥ ನಾಯಕ ಅವರನ್ನು ಸನ್ಮಾನಿಸಲಾಯಿತು.
ಸಾಂಕೇತಿಕವಾಗಿ ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತಿಸಲಾಯಿತು. ಪ್ರಾಚಾರ್ಯ ಆರ್.ಬಿ. ಪಾಟೀಲ, ನಿರ್ದೇಶಕ ಅಜ್ಜನಗೌಡ ಪಾಟೀಲ, ವೀರನಗೌಡ ಪಾಟೀಲ, ಶಿವನಗೌಡ ಪಾಟೀಲ, ಕಾರ್ಯದರ್ಶಿ ಮಹೇಶ್ ಗೌಡ ಪಾಟೀಲ ಇದ್ದರು. ವಂದನಾ ರೇವತ್ಗಾವ್ ಪ್ರಾರ್ಥಿಸಿದರು. ಭಾಗ್ಯಶ್ರೀ ಉಳ್ಳಾಗಡ್ಡಿ ಸ್ವಾಗತಿಸಿದರು. ಶ್ರೀದೇವಿ ನಿಡಗುಂದಿ, ಜ್ಯೋತಿ ಜಾಮದಾರ ನಿರೂಪಿಸಿದರು. ಶಿವರಂಜನ್ ಗುರು ಬಸಣ್ಣವರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.