ADVERTISEMENT

ಜೇಡರ ದಾಸಿಮಯ್ಯ ಅನುಭಾವಿ ಶರಣರು: ಬಿ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:00 IST
Last Updated 11 ಆಗಸ್ಟ್ 2024, 16:00 IST
ಬೆಟಗೇರಿಯ ನೀಲಕಂಠ ಮಠದಲ್ಲಿ ನಡೆದ ‘ವಚನ ಶ್ರಾವಣ-2024’ರ ಐದನೇ ದಿನದ ವಚನ ನಿರ್ವಚನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿ.ಬಿ.ಪಾಟೀಲ ಮಾತನಾಡಿದರು
ಬೆಟಗೇರಿಯ ನೀಲಕಂಠ ಮಠದಲ್ಲಿ ನಡೆದ ‘ವಚನ ಶ್ರಾವಣ-2024’ರ ಐದನೇ ದಿನದ ವಚನ ನಿರ್ವಚನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿ.ಬಿ.ಪಾಟೀಲ ಮಾತನಾಡಿದರು   

ಗದಗ: ‘ಮನುಷ್ಯನ ಬದುಕಿಗೆ ಸ್ನೇಹ ಇಲ್ಲವೇ ಸಂಘವೆನ್ನುವುದು ಬಹುಮುಖ್ಯ. ಅದರಲ್ಲೂ ಆತ ಸಂಸ್ಕಾರವಂತನಾಗಲು ಆತನ ಸುತ್ತಮುತ್ತಲಿನ ಪರಿಸರ, ಸಂಘವೇ ಕಾರಣವಾಗಿರುತ್ತದೆ. 12ನೇ ಶತಮಾನದ ಶರಣರ ಬದುಕು ಅದ್ಭುತವಾದುದು. ಇಲ್ಲಿ ಎಲ್ಲ ಕಾಯಕ ವರ್ಗದವರಿದ್ದರು. ಅಂತವರಲ್ಲಿ ಜೇಡರ ದಾಸಿಮಯ್ಯನವರು ಎದ್ದು ಕಾಣುವಂತವರು’ ಎಂದು ಪ್ರಾಚಾರ್ಯ ಬಿ.ಬಿ.ಪಾಟೀಲ ಹೇಳಿದರು.

ಬೆಟಗೇರಿಯ ನೀಲಕಂಠ ಮಠದ ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ವಚನ ಶ್ರಾವಣ-2024ರ ಐದನೇ ದಿನದ ವಚನ ನಿರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನೇಯುವ ಕಾಯಕದಲ್ಲಿದ್ದ ಶರಣ ಜೇಡರ ದಾಸಿಮಯ್ಯನವರ 176 ವಚನಗಳು ದೊರಕಿವೆ. ಇವರ ಪತ್ನಿ ದುಗ್ಗಲೆ ಆ ಹೆಣ್ಣುಮಗಳೂ ಕೂಡ ಪತಿಯ ಜೊತೆಗೆ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗಿಂತ ತುಸು ಹಿರಿಯರಾದ ಜೇಡರ ದಾಸಿಮಯ್ಯನವರ ವಚನಗಳು ತೀರಾ ಸರಳವಾಗಿವೆ’ ಎಂದು ತಿಳಿಸಿದರು.

ADVERTISEMENT

ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವದಳದ ಅಧ್ಯಕ್ಷ ವಿ.ಕೆ.ಕರಿಗೌಡ್ರ ಅಧ್ಯಕ್ಷತೆ ವಹಿಸಿದ್ದರು.

ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು. ಪ್ರಕಾಶ ಅಸುಂಡಿ ನಿರೂಪಣೆ ಮಾಡಿದರು. ದೇವಪ್ಪಾ ಗೋಟೂರ, ಬಸವರಾಜ ಗಣಪಾ, ಮಲ್ಲಿಕಾರ್ಜುನ ಕುದರಿ, ಬಿ.ಎಸ್.ಹಿಂಡಿ, ಜಕ್ಕಪ್ಪ ಕುಂಬಾರ ಇದ್ದರು.

ನೀಲಕಂಠೇಶ್ವರ ಮಠದ ಭಕ್ತರು ವಚನ ಶ್ರಾವಣ ನಡೆಸಿಕೊಟ್ಟರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.