ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದಲ್ಲಿ ಭಾನುವಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಗುಗ್ಗುಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಗ್ರಾಮಸ್ಥರೆಲ್ಲ ವೀರಭದ್ರೇಶ್ವರ ದೇವಸ್ಥಾನವನ್ನು ನೀರಿಂದ ತೊಳೆದು ಶುಚಿಗೊಳಿಸಿ ತಳಿರು ತೋರಣಗಳಿಂದ ದೇವಸ್ಥಾನ ಸಿಂಗರಿಸಿದ್ದರು. ಭಾನುವಾರ ಬೆಳಿಗ್ಗೆ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ ನಡೆಯಿತು. ನಂತರ ಗ್ರಾಮದ ಐದು ಮನೆಗಳಿಂದ ವೀರಭದ್ರ ದೇವರ ಮೂರ್ತಿಗಳನ್ನು ತಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಗುಗ್ಗುಳ ಮೆರವಣಿಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಸಕಲ ವಾದ್ಯಗಳೊಂದಿಗೆ ಪುರವಂತರು ವೀರಭದ್ರ ದೇವರ ಕುರಿತ ಒಡಪುಗಳನ್ನು ಹೇಳುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮರಳಿ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಶಸ್ತ್ರ ಹಾಕಿಸಿಕೊಂಡು ದೇವರಿಗೆ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಹತ್ತಿರ ಸ್ಥಾಪಿಸಿದ್ದ ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿ ವೀರಭದ್ರ ದೇವರು ಪ್ರಜಾಪತಿಯ ಶಿರ ಕತ್ತರಿಸಿದಂತೆ ಪುರವಂತರು ಹಿಟ್ಟಿನಿಂದ ಮಾಡಿದ ಪ್ರಜಾಪತಿಯ ಮೂರ್ತಿಯನ್ನು ತಮ್ಮ ಖಡ್ಗದಿಂದ ಕತ್ತರಿಸಿ ಅಗ್ನಿ ಕುಂಡದಲ್ಲಿ ಹಾಕಿದರು. ನಂತರ ಪುರವಂತರಾದಿಯಾಗಿ ಭಕ್ತರು ಅಗ್ನಿ ಪ್ರವೇಶಿಸಿದರು. ಸಂಜೆ ಅನ್ನಸಂತರ್ಪಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.