ಗದಗ: ‘ಸಂಘವು ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಸಂಘದ ಸಮುದಾಯ ಭವನ ನಿರ್ಮಾಣದಲ್ಲಿ ಸಮಾಜದ ಪ್ರತಿಯೊಬ್ಬ ಸದಸ್ಯರ ಪಾತ್ರವಿದೆ’ ಎಂದು ಡಾ.ಸುರೇಶ ಎಸ್. ನಾರಾಯಣಪುರ ಹೇಳಿದರು.
ನಗರದ ರಾಚೋಟೇಶ್ವರ ದೇವಸ್ಥಾನದಲ್ಲಿ ನಡೆದ ಗದಗ ಜಿಲ್ಲಾ ವೀರಶೈವ ಶಿವಸಿಂಪಿ ಸಮಾಜದ ವಾರ್ಷಿಕ ಸಭೆ ಮತ್ತು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 75 ವಸಂತಗಳನ್ನು ಕಳೆದ ಸಮಾಜದ ಹಿರಿಯರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸಮಾಜ ಬಾಂಧವರು ಮುಂದೆ ಕೂಡ ಇದೇರೀತಿಯ ಸಹಾಯ ಸಹಕಾರ ಕೊಟ್ಟರೆ ಇನ್ನೂ ಹೆಚ್ಚಿನ ಕಾರ್ಯ ಮಾಡಬಹುದು’ ಎಂದರು.
ಮುಖಂಡ ಆರ್.ಟಿ.ನಾರಾಯಣಪುರ ಮಾತನಾಡಿ, ‘ಮುಂದೆ ಬರುವ ವರ್ಷಗಳಲ್ಲಿ ಪ್ರತಿಭಾ ಪುರಸ್ಕಾರದ ಹಣವನ್ನು ದ್ವಿಗುಣ ಗೊಳಿಸಲಾಗುವುದು. ಇದರ ಸೌಲಭ್ಯ ಪಡೆದು ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು’ ಎಂದರು.
ಸಮಾಜದ ಮಾಜಿ ಅಧ್ಯಕ್ಷ ಸಿ.ವಿ.ಗಂಗಾವತಿ ಮಾತನಾಡಿ, ‘ಮಕ್ಕಳಲ್ಲಿ ಓದುವ ಬಗ್ಗೆ ಆಸಕ್ತಿ ಮೂಡಿಸಲೆಂದು ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ. ಮಕ್ಕಳು ಮೊಬೈಲ್ ಗೀಳು ಬಿಟ್ಟು, ವಿದ್ಯಾವಂತರಾಗಬೇಕು. ಒಳ್ಳೆಯ ಸಂಸ್ಕಾರ ಪಡೆಯಬೇಕು’ ಎಂದರು.
ಕಾರ್ಯದರ್ಶಿ ಜಗದೀಶ್ ನವಲಗುಂದ ಠರಾವು ಮಂಡಿಸಿದರು. ವೀರೇಶ್ ಎಸ್ ನಾರಾಯಣಪುರ ಆಯವ್ಯಯ ಮಂಡಿಸಿದರು.
ಸಂಘದ ಹಿರಿಯರಾದ ಶಿವಪ್ಪ ಮೆಣಸಗಿ, ಸೋಮಣ್ಣ ಶಿವಶಿಂಪರ, ಡಾ. ಎಂ.ವಿ.ಐಹೊಳೆ, ವೀರಣ್ಣ ಮುದಕವಿ, ರತ್ನಮ್ಮ ಇಟಗಿ ಇದ್ದರು.
ಪ್ರಭುಲಿಂಗ ಶಿವಶಿಂಪಗೇರ ಪ್ರಾರ್ಥನೆ ಹಾಡಿದರು. ವಿರೂಪಾಕ್ಷಪ್ಪ ನಸಲಿ ಸ್ವಾಗತಿಸಿದರು. ರಾಚಪ್ಪ ಕುಪ್ಪಸ್ತ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಜುನಾಥ ಶಿ. ಜಕ್ಲಿ ವಂದಿಸಿದರು.
ಶಿವಸಿಂಪಿ ಸಮಾಜದದಿಂದ ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ಮಕ್ಕಳನ್ನು ಪ್ರೋತ್ಸಾಹಿಸಿದಂತೆ ಆಗುವುದರ ಜತೆಗೆ ಸಮಾಜದ ಏಳಿಗೆ ಸಹ ಆಗುತ್ತದೆ.ಚೆನ್ನಪ್ಪ ಷಣ್ಮುಕಿ ಕಾರ್ಯಕಾರಿ ಮಂಡಳಿಯ ಸದಸ್ಯ
ಅಧ್ಯಕ್ಷರಿಂದ ರಚನಾತ್ಮಕ ಕೆಲಸ
‘ಈಗಿನ ಅಧ್ಯಕ್ಷರು ರಚನಾತ್ಮಕವಾಗಿ ಕೆಲಸ ನಿರ್ವಹಿಸುತ್ತಿದ್ದು ಸುಮಾರು 800 ಆಜೀವ ಸದಸ್ಯರನ್ನು ಮಾಡಿದ್ದಾರೆ’ ಎಂದು ಸಂಘದ ಸದಸ್ಯ ಡಾ. ರಾಜೇಂದ್ರ ಗಡಾದ ಹೇಳಿದರು. ‘ಜಿಲ್ಲೆಯ ಅನೇಕ ಶಹರ ಮತ್ತು ಗ್ರಾಮಗಳಿಗೆ ಭೇಟಿ ಕೊಟ್ಟು ಹಾಗೂ ಸಂಘದ ಸಮುದಾಯ ಭವನಕ್ಕೆ ಸರ್ವ ಪಕ್ಷಗಳ ರಾಜಕೀಯ ನಾಯಕರಿಂದ ಹಾಗೂ ಸಂಘದ ಸದಸ್ಯರಿಂದ ವಂತಿಗೆ ಸಂಗ್ರಹಿಸಿರುವುದು ಶ್ಲಾಘನೀಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.