ಸರಿಯಾದ ಸಮಯಕ್ಕೆ ನೀರು ಪೂರೈಸಬೇಕು ಎಂದು ಆಗ್ರಹಿಸಿ ಶುಕ್ರವಾರ ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು ಗ್ರಾಮದಲ್ಲಿ ಮಹಿಳೆಯರು ಗ್ರಾಮ ಪಂಚಾಯ್ತಿಗೆ ಆಗಮಿಸಿದ್ದರು
ಲಕ್ಷ್ಮೇಶ್ವರ: ಸರಿಯಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯ್ತಿಗೆ ದೌಡಾಯಿಸಿದ ಘಟನೆ ತಾಲ್ಲೂಕಿನ ಬಟ್ಟೂರು ಗ್ರಾಮದಲ್ಲಿ ಶುಕ್ರವಾರ ನಡೆಯಿತು.
ಕಳೆದ ನಾಲ್ಕೈದು ದಿನಗಳಿಂದ ಪಂಚಾಯ್ತಿಯವರು ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಬೇರೆ ಕಡೆಯಿಂದ ನೀರು ತರುವುದೇ ನಮಗೊಂದು ಕೆಲಸವಾಗಿದೆ. ಕಾರಣ ಸರಿಯಾದ ಸಮಯಕ್ಕೆ ನೀರು ಪೂರೈಸಬೇಕು ಎಂದು ಮಹಿಳೆಯರು ಒತ್ತಾಯಿಸಿದರು.
ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಮಹಿಳೆಯರಿಗೆ ಶೌಚಕ್ಕೆ ಹೋಗಲು ತೊಂದರೆ ಆಗುತ್ತಿದೆ. ಆದ್ದರಿಂದ ಆದಷ್ಟು ಬೇಗನೇ ಗ್ರಾಮದ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಗಂಗವ್ವ ಚೌಡಾಳ, ಶ್ರುತಿ ವಡವಿ, ನಿಂಗವ್ವ ರೋಣದ, ಫಕ್ಕೀರವ್ವ ಕುರ್ತಕೋಟಿ, ಸವಿತಾ ಕಮ್ಮಾರ, ವಿದಾಭಾನು ಸುಂಕದ, ಕಾಶವ್ವ ಚೌಡಾಳ,ಈರಣ್ಣ ಬಾರಕೇರ, ಸತೀಶ ಅತ್ತಿಗೇರಿ, ಎಂ.ಬಿ.ಉಡಚಗೌಡ್ರ, ಪ್ರೇಮಾ ಬಾರಕೇರ, ಮತ್ತಿತರರು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, ‘ಮೂರು ತಿಂಗಳ ಒಳಗಾಗಿ ಗ್ರಾಮದಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು. ಮತ್ತು ನೀರಿನ ಸಮಸ್ಯೆ ಪರಿಹರಿಸಲು ಕತ್ಷಣದಿಂದ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ ನಂತರ ಮಹಿಳೆಯರು ಅಲ್ಲಿಂದ ತೆರಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಗದೀಶಗೌಡ ಪಾಟೀಲ, ಸದಸ್ಯ ಮಾಲತೇಶ ಹೊಳಲಾಪುರ, ಪಿಡಿಒ ಮಲ್ಲೇಶ ಮಾದರ, ನಾಗಪ್ಪ ಹೂಗಾರ, ಯಲ್ಲಪ್ಪ ಹೊಳಲಾಪುರ, ಕಿರಣ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.