ಗದಗ: ‘ಹಿರಿಯರು ಭೂಮಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು. ಬದುಕಿಗೆ ಆಸರೆಯಾದ ಮಣ್ಣನ್ನು ಇಂದು ಮನುಷ್ಯ ಅವಸಾನದೆಡೆಗೆ ಕೊಂಡೊಯ್ಯುತ್ತಿರುವುದು ವಿಷಾದಕರ ಸಂಗತಿ’ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ವೀರೇಶ ಹುನಗುಂದ ಅಭಿಪ್ರಾಯಪಟ್ಟರು.
ಹುಲಕೋಟಿ ಗ್ರಾಮದ ಐಸಿಎಆರ್ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಮಣ್ಣು ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮನುಷ್ಯನ ದುರಾಸೆಯಿಂದಾಗಿ ಇಂದು ಭೂತಾಯಿಯ ಮಡಿಲು ಕಲುಷಿತಗೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣು ಉಳಿಸಲು ಇಂದು ನಾವೆಲ್ಲರೂ ಚೌಕು ಮಡಿ, ಹೊದಿಕೆ ಬೆಳೆ, ಬೆಳೆ ಪರಿವರ್ತನೆ, ಮಣ್ಣಿನ ಮುಚ್ಚಿಗೆಗಳಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ಇಂದಿನ ದಿನಗಳಲ್ಲಿ ಪಶು ಆಧಾರಿತ ಕೃಷಿ ಹಾಗೂ ನೀರಿನ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡುವುದು ಅತ್ಯಗತ್ಯ’ ಎಂದು ಹೇಳಿದರು.
ವಿಶ್ವ ಮಣ್ಣು ದಿನದ ಧ್ಯೇಯ ವಾಕ್ಯದಂತೆ ಮಣ್ಣನ್ನು ಜೀವಂತವಾಗಿಡಿ, ಮಣ್ಣಿನ ಜೀವ ವೈವಿಧ್ಯತೆಯನ್ನು ರಕ್ಷಿಸಬೇಕು ಎಂದು ಕೃಷಿ ವಿಸ್ತರಣ ವಿಭಾಗದ ವಿಜ್ಞಾನಿ ಎಸ್.ಎಚ್.ಆದಾಪೂರ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎನ್.ಎಚ್.ಭಂಡಿ ಮಣ್ಣಿನ ಪ್ರಯೋಜನ, ಮಣ್ಣಿನ ಮಾದರಿ ಪರೀಕ್ಷೆಯ ವಿಧಾನ, ಮಣ್ಣಿಗೆ ನೀಡಬೇಕಾದ ಪೋಷಕಾಂಶಗಳ ಪ್ರಮಾಣಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ವಿಡಿಯೊ ಸಂದೇಶ ಬಿತ್ತರಿಸಲಾಯಿತು.
ಧಾರವಾಡದ ಕಾಡಾ ಸಹಾಯಕ ಕೃಷಿ ಅಧಿಕಾರಿ ಆರ್.ಎಸ್.ಹಿರೇಮಠ, ಬಸವೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ರಮೇಶ ಅಣ್ಣಿಗೇರಿ ಸೇರಿದಂತೆ ಯಾದವಾಡ, ಗದಗ, ರೋಣ ತಾಲ್ಲೂಕಿನ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.
ಆತ್ಮ ಯೋಜನೆ ಉಪ ಯೋಜನಾ ನಿರ್ದೇಶಕ ನಿಶಾಂತ ಬಂಕಾಪೂರ, ವಿಜ್ಞಾನಿ ವಿ.ಡಿ.ವೈಕುಂಟೆ ಇದ್ದರು.
ಮಣ್ಣಿನ ಮಹತ್ವ ಅರಿಯಲು ಸಲಹೆ
ಅಧ್ಯಕ್ಷತೆ ವಹಿಸಿದ್ದ ಐಸಿಎಆರ್ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮತ್ತು ಹಿರಿಯ ವಿಜ್ಙಾನಿ ಡಾ. ಎಲ್.ಜಿ.ಹಿರೇಗೌಡರ ಮಾತನಾಡಿ, ‘ಇಂದಿನ ಕೃಷಿ ಹಲವು ಸಮಸ್ಯೆ, ಸವಾಲುಗಳಿಂದ ಕೂಡಿದೆ. ಆದ್ದರಿಂದ ರೈತರು ಮಣ್ಣಿನ ಬಗ್ಗೆ ಮಹತ್ವ ನೀಡಬೇಕಿದೆ. ಮಣ್ಣಿನ ಮಾದರಿಗಳನ್ನು ತಂದು ಪರೀಕ್ಷೆ ಮಾಡಿಸಿ ಅದರ ಮಾದರಿ ಚೀಟಿಯ ಆಧಾರದ ಮೇಲೆ ಜಮೀನಿಗೆ ಪೋಷಕಾಂಶಗಳನ್ನು ಒದಗಿಸಬೇಕು’ ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.