ಅರಸೀಕೆರೆ: ‘ಮನುಷ್ಯ ಎಷ್ಟು ದಿನ ಬದುಕಿದ ಎಂಬುದಕ್ಕಿಂತಲೂ, ಹೇಗೆ ಬದುಕಿದ ಎಂಬುದು ಮುಖ್ಯ’ ಎಂದು ಬಾಳೆ ಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿ ಮೇಳೇನಹಳ್ಳಿ ಗ್ರಾಮದಲ್ಲಿ ನಡೆದ ‘ಚಿಕ್ಕವೀರಯ್ಯ ಸಂಸ್ಮರಣೆ ಹಾಗೂ ಧರ್ಮ ಜನ ಜಾಗೃತಿ’ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಾನವ ಜೀವನ ಅಮೂಲ್ಯ. ಅರಿತು ಬಾಳಿದರೆ ಬಾಳು ಬಂಗಾರ, ಮರೆತು ಬಾಳಿದರೆ ಬಾಳು ಬಂಧನಕಾರಿ’ ಎಂದು ಕಿವಿಮಾತು ಹೇಳಿದರು.
‘ಮನುಷ್ಯ ಬದುಕಿದ್ದಾಗ ಮಾಡಿದ ಕೆಲಸಗಳು ಮಾತ್ರ ಉಳಿಯುವುದು. ಅರಿವು, ಆಚಾರದಿಂದ ಉತ್ಕೃಷ್ಟತೆ ಪಡೆಯಲು ಸಾಧ್ಯ. ಗಳಿಸುವುದನ್ನಷ್ಟೇ ಅಲ್ಲ; ಬದುಕುವುದನ್ನು ಕಲಿಸುವುದೇ ನಿಜ ಧರ್ಮ’ ಎಂದು ಹೇಳಿದರು.
ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ‘ಮನಸ್ಸು ಗೆದ್ದವನು ಮಹದೇವ; ಗೆಲ್ಲದವನು ನಾಸ್ತಿಕನಾ. ಮನುಷ್ಯ ದೈವತ್ವದೆಡೆಗೆ ಸಾಗಲು ಧಾರ್ಮಿಕ ಸತ್ಸಂಗಗಳಲ್ಲಿ ಭಾಗವಹಿಸಬೇಕು’ ಎಂದು ಸಲಹೆ ಮಾಡಿದರು.
‘ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ‘ಸಮಾಜಕ್ಕೆ ಮಠ–ಮಾನ್ಯ, ಗುರುಗಳ ಮಾರ್ಗದರ್ಶನ ಅವಶ್ಯವಿದೆ’ ಎಂದು ಹೇಳಿದರು. ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಜಿ.ಪಂ ಮಾಜಿ ಸದಸ್ಯ ಕೆ.ಪಿ.ಶಿವಮೂರ್ತಿ, ನಗರಸಭೆ ಸದಸ್ಯ ಕೆ.ಸಿ.ಪಂಚಾಕ್ಷರಿ, ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್. ಸಿದ್ರಾಮಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಮುರುಂಡಿ ಶಿವಯ್ಯ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕೆ.ವಿ. ನಿರ್ವಾಣಸ್ವಾಮಿ, ತಾ.ಪಂ ಮಾಜಿ ಸದಸ್ಯ ಯರಿಗೇನಹಳ್ಳಿ ಜಯಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.