ADVERTISEMENT

ಅವಮಾನಿಸಿದ ಸಚಿವ ಸೋಮಣ್ಣ: ಟೀಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 8:35 IST
Last Updated 16 ಸೆಪ್ಟೆಂಬರ್ 2011, 8:35 IST

ಹಾಸನ: `ಹಾಸನ ಅರಕಲಗೂಡು ರಸ್ತೆ ಹದಗೆಟ್ಟು ವರ್ಷಗಳೇ ಉರುಳಿವೆ. ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರನ್ನು ವಿನಂತಿಸಲು ಹೋದರೆ ಅವರು ನಮ್ಮೆಲ್ಲರನ್ನು ಅವಮಾನಿಸಿ ಕಳುಹಿಸಿದ್ದಾರೆ~ ಎಂದು ಗೊರೂರು ಸಲೀಂ ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು.

`ಇದು ಹಾಸನದಿಂದ ಹೊರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಹಲವು ವರ್ಷಗಳಿಂದ ದುರಸ್ತಿ ಕಾಣದೆ ಅಪಾಕಾರಿ ಸ್ಥಿತಿಗೆ ಬಂದಿದೆ. ಗೊರೂರಿನಲ್ಲಿ 1927ರಲ್ಲಿ ನಿರ್ಮಾಣವಾಗಿರುವ ಸೇತುವೆಯೂ ಹಲವು ಕಡೆ ಬಿರುಕು ಬಿಟ್ಟಿದ್ದು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ಈ ಎಲ್ಲ ವಿಚಾರಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಆದರೆ ಯಾರೂ ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ. ಹಲವು ವರ್ಷಗಳಿಂದ ಭಾರತೀಯ ಜನತಾಪಕ್ಷದಲ್ಲಿ ಕೆಲಸ ಮಾಡುತ್ತಿರುವುದರಿಂದ ಕೆಲ ದಿನಗಳ ಹಿಂದೆ ಗೊರೂರಿನ ನಾಗರಿಕರೊಂದಿಗೆ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದ್ದೆ. ಆದರೆ ಅವರು ನಮ್ಮಡನೆ ತುಚ್ಛವಾಗಿ ಮಾತನಾಡಿದರು. ಇದರಿಂದಾಗಿ ಊರಿನವರೆಲ್ಲ ನನ್ನನ್ನು ಹೀಯಾಳಿಸುವಂತಾಯಿತು ಎಂದು ಅವರು ಆರೋಪಿಸಿದರು.

ಈ ರಸ್ತೆ ಮೂವರು ಶಾಸಕರ ವ್ಯಾಪ್ತಿಯಲ್ಲಿ ಬರುತ್ತಿದೆ. ಆದರೆ ಯಾರೂ ಇದರತ್ತ ಗಮನಹರಿಸುತ್ತಿಲ್ಲ. ಜೆಡಿಎಸ್‌ನವರಿಗೆ ಹೊಳೆನರಸೀಪುರ ಉದ್ಧಾರವಾದರೆ ಸಾಕು. ಜಿಲ್ಲೆಯ ಉಳಿದ ಜನರ ಸಮಸ್ಯೆ ಬಗ್ಗೆ ಯಾವ ಶಾಸಕರಿಗೂ ಕಾಳಜಿ ಇಲ್ಲ. ಹೇಮಾವತಿ ಜಲಾಶಯವಿದ್ದರೂ ಗೊರೂರಿನ ಜನರು ಮಾತ್ರ ಮಲಿನ ನೀರನ್ನು ಕುಡಿಯುತ್ತಾರೆ. ಮುಳುಗಡೆ ಪ್ರದೇಶದ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದ್ದೇವೆ, ಎರಡೆರಡು ಬಾರಿ ಸರ್ವೆ ಮಾಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ~ ಎಂದರು.

ಪಕ್ಷದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಲೀಂ, `ವಕ್ಫ್ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷನಾಗಿ ನನ್ನನ್ನು ನೇಮಕ ಮಾಡುವಂತೆ ಪಕ್ಷದ ಮುಖಂಡರೆಲ್ಲ ಹೇಳಿದ್ದರೂ ಅವರು ನನ್ನ ಬದಲು ಇನ್ನಾರನ್ನೋ ನೇಮಿಸಿದ್ದಾರೆ~ ಎಂದರು. ಆದರೆ ಪಕ್ಷ ಬಿಡುವ ಬಗ್ಗೆ ನಾನಿನ್ನೂ ಚಿಂತನೆ ನಡೆಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಬರುವ ಸೋಮ ವಾರದೊಳಗೆ ರಸ್ತೆ ದುರಸ್ತಿ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ರಸ್ತೆ ತಡೆ ನಡೆಸಿ ಹೋರಾಟ ಆರಂಭಿಸುತ್ತೇವೆ~ ಎಂದು ಸಲೀಮ್  ತಿಳಿಸಿದರು.

ಲಿಂಗಸಾರಥಿ, ಶಿವಕುಮಾರ್, ಇಕ್ಬಾಲ್ ಅಹಮದ್, ಕನಕರಾಜ್, ಶಿವಣ್ಣ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.