ADVERTISEMENT

ಆರು ಮಂದಿಗೆ 1 ವರ್ಷ ಜೈಲು ಶಿಕ್ಷೆ

ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 6:13 IST
Last Updated 19 ಏಪ್ರಿಲ್ 2013, 6:13 IST

ಅರಸೀಕೆರೆ: ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿ ಸೇವೆಗೆ ಅಡ್ಡಿಪಡಿಸಿದ್ದ ಆರು ಮಂದಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ, ತಲಾ 500 ರೂಪಾಯಿ ದಂಡಿ ವಿಧಿಸಿದೆ.

ಗರುಡನಗಿರಿ ಗ್ರಾಮದ ರಮೇಶ್ ಬಿನ್ ಉಗ್ರಪ್ಪ, ವಿರೂಪಾಕ್ಷಪ್ಪ ಬಿನ್ ಉಗ್ರಪ್ಪ, ಮರಿಸಂಕಪ್ಪ ಬಿನ್ ಕೆಂದಾಸಪ್ಪ, ಪ್ರಸನ್ನಕುಮಾರ್ ಬಿನ್ ನಾರಾಯ ಣಶೆಟ್ಟಿ, ಯೋಗೀಶ್ ಬಿನ್ ಶಿವಶಂಕರಪ್ಪ, ಸಂಕಯ್ಯ ಬಿನ್ ರಾಮಶೆಟ್ಟಿ ಶಿಕ್ಷೆಗೆ ಗುರಿಯಾದವರು.

ಇವರು 2009ರ ಡಿಸೆಂಬರ್ 14ರಂದು ರಾತ್ರಿ 8.30 ರ ಸಮಯದಲ್ಲಿ ಶ್ಯಾನೇಗೆರೆ-ಗಂಜಿಗೆರೆಪುರ ರಸ್ತೆ ಮಧ್ಯೆ ಮಾರುತಿ ವ್ಯಾನನ್ನು ಲಾರಿಗೆ ಅಡ್ಡವಾಗಿ ನಿಲ್ಲಿಸಿ ಜಗಳವಾಡುತ್ತಿದ್ದರು. ಈ ಸಂದರ್ಭದಲ್ಲಿ ಕಣಕಟ್ಟೆ ಕಡೆಯಿಂದ ಬಾಣಾವರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸು ವ್ಯಾನಿನ ಪಕ್ಕದಲ್ಲಿ ಮುಂದಕ್ಕೆ ಹೋಗುತ್ತಿದ್ದಾಗ ಈ ಆರು ಮಂದಿ ಬಸ್ಸಿನ ಚಾಲಕ ದಾಸಪ್ಪ ಅವರೊಂದಿಗೆ ಜಗಳವಾಡಿ ಅವರ ಸಮವಸ್ತ್ರ (ಯೂನಿಫಾರಂ) ಹರಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ದಾಸಪ್ಪ ಅವರು ಬಾಣಾವರ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಅರಸೀಕೆರೆ ನ್ಯಾಯಾಲಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರಕಾಶ್ ಚನ್ನಪ್ಪ ಕುರುಬೆಟ್ ಅವರು ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರಿ ಅಭಿಯೋಜಕಿ ಮಮತಾ ವಾದ ಮಂಡಿಸಿದ್ದರು.

ಅಕ್ರಮ ಮದ್ಯ ವಶ: ತಾಲ್ಲೂಕಿನ ಹಾರನಹಳ್ಳಿಸರ್ಕಲ್ ಅರಳಿ ಮರದ ಬಳಿ ಮಂಗಳವಾರ ಸಂಜೆ 5.30 ಕ್ಕೆ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದು ್ದದನ್ನು ಪತ್ತೆಹಚ್ಚಿದ ಪಿಎಸ್‌ಐ ಕೆ ಪ್ರಭಾಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋದಾಗ ಆರೋಪಿ ಮಾಲನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಿಟ್ಟು ಹೋಗಿದ್ದ 3,500 ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಜಾವಗಲ್ ಪೊಳೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.