ADVERTISEMENT

ಇನ್ನು ಹಲಸಿನ ಹಣ್ಣಿನ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 9:15 IST
Last Updated 20 ಜೂನ್ 2011, 9:15 IST

ಹೊಳೆನರಸೀಪುರ: ಇನ್ನೇನು ಮಾವಿನಹಣ್ಣಿನ ಸುಗ್ಗಿ ಮುಗಿಯುತ್ತಿದೆ ಎನ್ನುವಷ್ಟರಲ್ಲೇ ಹಲಸಿನ ಹಣ್ಣು ಪಟ್ಟಣದ ಮಾರುಕಟ್ಟೆಯಲ್ಲಿ ದಾಳಿ ಇಟ್ಟಿದೆ. 

ತಾಲ್ಲೂಕಿನಲ್ಲಿ ಹಿಂದಿನ ವರ್ಷಗಳಿಗಿಂತ ಈ ವರ್ಷ ರಸಪೂರಿ ಮಾವು ಅತಿ ಹೆಚ್ಚಾಗಿ ಮಾರಾಟವಾಯಿತು. ರಸಪೂರಿ ಮಾವು ಹಿಂದಿನ ವರ್ಷಗಳಲ್ಲಿ ಪ್ರಾರಂಭದಲ್ಲಿ ಕೆ.ಜಿಗೆ ರೂ100 ಫಸಲು ಮುಗಿಯುವ ವೇಳೆಗೆ ರೂ. 50ರವರೆಗೆ  ಮಾರಾಟವಾಗುತ್ತಿತ್ತು. ಆದರೆ ಈ ವರ್ಷ 70 ರೂ ಪಡೆದು ಮಾರುಕಟ್ಟೆ ಪ್ರವೇಶಿಸಿದ ಮಾವು ಕೆ.ಜಿ. ರೂ15 ಕ್ಕೆ ಇಳಿದಿದೆ. ಈ ವರ್ಷ ರಸಪೂರಿ ಮಾವಿನ ಜೊತೆಗೆ ಸೈಂದೂರ, ಬಾದಾಮಿ, ವಾಲಾಜಾ, ಮಲಗೋಬ, ಜೀರಿಗೆ ಮಾವಿನ ಹಣ್ಣೂ ಹೆಚ್ಚಾಗಿ ಬಂದಿದ್ದರಿಂದ ಮಾವಿನ ರಾಜಾ ಎನ್ನಲಾಗುವ ರಸಪೂರಿ ಹೆಚ್ಚು ಬೆಲೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. 

ಬೆಳಗಿನ ವೇಳೆ ಇಲ್ಲಿನ ಗಾಂಧಿ ವೃತ್ತದಲ್ಲಿ ರೂ.30 ರಿಂದ 50 ಕ್ಕೆ ಒಳ್ಳೆಯ ದೊಡ್ಡ ಹಲಸಿನಹಣ್ಣು ಬಿಕರಿಯಾಗುತ್ತಿವೆ. ರಸ್ತೆ ಬದಿ ಹಲಸಿನ ಹಣ್ಣು ಮಾರಾಟಗಾರರು  ದಪ್ಪ ತೊಳೆ ಬಿಡುವ ಹಲಸಿನ ಹಣ್ಣುಗಳನ್ನು ಮರದ ಮಾಲೀಕರಿಗೆ ಕೊಟ್ಟಿರುತ್ತಾರಾದ್ದರಿಂದ ಮಾರುವವರು ಕೊಳ್ಳವಂತಹ ಉತ್ತಮ ಹಣ್ಣು ತಿನ್ನುವವರಿಗೆ ಸಿಗುವುದಿಲ್ಲ. ತೊಳೆ ಚಿಕ್ಕದಿದ್ದರೂ ಪರವಾಗಿಲ್ಲ ಹಣ್ಣು ರುಚಿಯಾಗಿದ್ದರೆ ಸಾಕು ಎನ್ನುವವವರು ಬೆಳಿಗ್ಗೆ 7 ಗಂಟೆಗೆ ಇಲ್ಲಿನ ಗಾಂಧಿ ವೃತ್ತಕ್ಕೆ ಬಂದರೆ ಕಡಿಮೆ ಬೆಲೆಗೆ ಹಲಸಿನಹಣ್ಣು ಖರೀದಿಸಬಹುದು. 

ನವೆಂಬರ್‌ನಿಂದ ಆಗಸ್ಟ್‌ವರೆಗೂ ಹಲಸಿನ ಫಸಲು ಉತ್ತಮವಾಗಿರುತ್ತದೆ. ತಾಲ್ಲೂಕಿನಲ್ಲಿ ಸುಮಾರು 100 ಎಕರೆಯಲ್ಲಿ ಹಲಸಿನ ಮರಗಳಿವೆ. ಅಂದಾಜಿನ ಪ್ರಕಾರ ವರ್ಷಕ್ಕೆ 5000 ಸಾವಿರ ಟನ್ ಹಲಸಿನ ಹಣ್ಣು ಮಾರಾಟವಾಗುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿ ಭಾನುಪ್ರಕಾಶ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.