ADVERTISEMENT

‘ಒಂದು ವರ್ಗದ ಓಲೈಕೆಯಿಂದ ಅಭಿವೃದ್ಧಿ ಅಸಾಧ್ಯ–ದೇವೇಗೌಡ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:59 IST
Last Updated 10 ನವೆಂಬರ್ 2017, 6:59 IST
ಅರಸೀಕೆರೆ ಬಳಿ ಜೇನುಕಲ್‌ ನಗರ ಬಡಾವಣೆ ಸಮೀಪ ₹ 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಂಸದ ಎಚ್‌.ಡಿ. ದೇವೇಗೌಡ ಉದ್ಘಾಟಿಸಿದರು
ಅರಸೀಕೆರೆ ಬಳಿ ಜೇನುಕಲ್‌ ನಗರ ಬಡಾವಣೆ ಸಮೀಪ ₹ 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಂಸದ ಎಚ್‌.ಡಿ. ದೇವೇಗೌಡ ಉದ್ಘಾಟಿಸಿದರು   

ಅರಸೀಕೆರೆ: ‘ಯಾವುದೋ ಒಂದು ಸಮಾಜದ ಹೆಸರಿನಲ್ಲಿ ರಾಜಕಾರಣ ಮಾಡುವುದು ಸಾಧ್ಯವಿಲ್ಲ. ಎಲ್ಲ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ’ ಎಂದು ಸಂಸದ ಎಚ್.ಡಿ. ದೇವೇಗೌಡ ಹಾಗೂ ಸಂಸದ ಎಚ್‌.ಡಿ. ದೇವೇಗೌಡ ತಿಳಿಸಿದರು.

ನಗರದ ಹೊರಭಾಗದ ಜೇನುಕಲ್‌ ನಗರ ಬಡಾವಣೆ ಸಮೀಪ ನೂತನ, ₹ 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಸಮಾಜ ಅಭಿವೃದ್ಧಿಯಾಗದ ಹೊರತು ರಾಜ್ಯದ ಅಭಿವೃದ್ದಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅರಿತು–ಬೆರೆತು ನಡೆದಾಗ ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಬಹುದು ಎಂದರು.

ADVERTISEMENT

ಇತಿಹಾಸದ ಪ್ರತಿ ಪುಟಗಳು ಸಾರ್ವಕಾಲಿಕ ಶ್ರೇಷ್ಠ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ಎಲ್ಲ ಧರ್ಮೀಯರಿಗೂ ಸರ್ವರೀತಿ ಒಪ್ಪಿಗೆಯಾಗಿರುವ ಮಹಾಕಾವ್ಯ. ಇಡೀ ವಿಶ್ವ ಬೆರಗಾಗುವಂತಹ ರಾಮಾಯಣ ರಚಿಸಿದ್ದು ಒಂದು ರೋಚಕ ಆಕಸ್ಮಿಕ ಘಟನೆ ಎಂದು ಹೇಳಿದರು.

‘ಮಹರ್ಷಿ ವಾಲ್ಮೀಕಿ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿ. ರಾಮಾಯಣ ಗ್ರಂಥದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹರ್ಷಿ ಜಗತ್ತಿನ ಶ್ರೇಷ್ಠ ದಾರ್ಶನಿಕ’ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಪ್ರತಿ ಸಮಾಜವನ್ನು ಗುರುತಿಸಿ ನಗರದ ವ್ಯಾಪ್ತಿಯಲ್ಲಿ ಸಮು ದಾಯ ಭವನವನ್ನು ನಿರ್ಮಿಸಿಕೊಡಲು ನಾನು ಶಾಸಕನಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಉಗ್ರಪ್ಪ, ‘ಇಂದಿನ ಸಭೆ ಯಾವುದೇ ರಾಜಕೀಯ ಪ್ರೇರಿತವಲ್ಲ,ಎಲ್ಲರೂ ಸಂಕುಚಿತ ಮನೋಭಾವ ತೊರೆದು ಪರಸ್ಪರ ವಿಶ್ವಾಸದಿಂದ, ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದರು. ಒಕ್ಕಲಿಗ, ಲಿಂಗಾಯಿತರು ಬಿಟ್ಟರೆ 3ನೇ ಅತಿ ದೊಡ್ಡ ಸಮುದಾಯ ನಾಯಕಸಮುದಾಯ. ಆದರೆ ಸಂಘಟನೆ ಕೊರತೆಯಿಂದ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆಗಾಗಿ ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.

ಹರಿಹರ ತಾಲ್ಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಜಿ.ಪಂ.ಅಧ್ಯಕ್ಷೆ ಶ್ವೇತಾ ದೆೇವರಾಜ್‌ ಮಾತನಾಡಿದರು. ಜಿ.ಪಂ ಸದಸ್ಯರಾದ ಎಂ.ಎಸ್‌.ವಿ ಸ್ವಾಮಿ, ಆಶೋಕ್‌ ಲೀಲಾ ಧರ್ಮಶೇಖರ್‌, ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್‌, ಜಿಲ್ಲಾ ವಾಲ್ಮೀಕಿ ಮಹಾ ಸಭಾದ ಗೌರವಾಧ್ಯಕ್ಷ ಬಿ.ವಿ.ಮಹಾಂತಪ್ಪ,ವಾಲೇಹಳ್ಳಿ ಮಹೇಶ್‌, ತಾಲ್ಲೂಕು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಟಿ.ಜಿ.ಬಸವರಾಜ್‌, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಕರಿನಾಯಕ ಮುಖಂಡರಾದ ದೇವರಾಜ್‌ ಉಪಸ್ಥಿತರಿದ್ದರು.

ಮೆರವಣಿಗೆ: ಇದಕ್ಕ ಮುನ್ನ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಅಶ್ವಾರೂಢ ವಾಹನದಲ್ಲಿ ಪ್ರತಿಷ್ಠಾಪಿಸಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ನೂರಾರು ಜನರು ಭಾಗವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಮರೆವಣಿಗೆ ನಡೆಸಿ ವೇದಿಕೆಗೆ ಸ್ಥಳಕ್ಕೆ ಮೆರವಣಿಗೆ ತಲುಪಿತು. ಡೊಳ್ಳು ಕುಣಿತ,ವೀರಗಾಸೆ ನೃತ್ಯ ನೆರೆದಿದ್ದ ಜನರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.