ADVERTISEMENT

ಒಡೆದ ಪೈಪ್: ನೀರು ಪೂರೈಕೆ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 8:53 IST
Last Updated 21 ಡಿಸೆಂಬರ್ 2013, 8:53 IST

ಹಾಸನ: ಗೊರೂರು ಜಲಾಶಯದಿಂದ ಹಾಸನಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ ಗುರುವಾರ ರಾತ್ರಿ ಒಡೆದುಹೋದ ಪರಿಣಾಮ ನಗರದ ಅನೇಕ ಭಾಗಗಳಲ್ಲಿ ಶುಕ್ರವಾರ ನೀರು ಸರಬರಾಜಾಗಿಲ್ಲ.

ಇತ್ತೀಚೆಗಷ್ಟೇ ಡಾಂಬರೀಕರಣ ಕಂಡಿದ್ದ ಬಿಟ್ಟಗೌಡನಹಳ್ಳಿ ಸರ್ಕಲ್‌ನಲ್ಲಿ ರಸ್ತೆ ಮಧ್ಯದಲ್ಲೇ ಗುರುವಾರ ರಾತ್ರಿ 8.30ರ ಸುಮಾರಿಗೆ ಪೈಪ್‌ ಒಡೆದು ನೀರು ಕಾರಂಜಿಯಂತೆ ಚಿಮ್ಮಿ, ಹೆದ್ದಾರಿ ಯಲ್ಲಿ ಸಂಚಾರವೂ ಸ್ವಲ್ಪಹೊತ್ತು ಅಸ್ತವ್ಯಸ್ತವಾಗಿತ್ತು.

ಇತ್ತೀಚೆಗಷ್ಟೇ ಇಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಸಂದರ್ಭದಲ್ಲಿ ಕಂಪನ ಉಂಟುಮಾಡುವ ರೋಲರ್‌ ಬಳಸಲಾಗಿತ್ತು. ಇದು ಆಳದವರೆಗೂ ಉಂಟುಮಾಡಿದ್ದ ಕಂಪನದಿಂ­ದಾ­ಗಿ ಪೈಪ್‌ ಒಡೆದಿರಬಹುದು ಎಂದು ಎಂಜಿನಿಯರು­ಗಳು ತಿಳಿಸಿದ್ದಾರೆ.

ರಾತ್ರಿ ಘಟನೆ ನಡೆದು ಸ್ವಲ್ಪ ಹೊತ್ತಿನಲ್ಲೇ ಗೊರೂರು ಜಲಾಶಯದ ಜಾಕ್‌ವೆಲ್‌ನ ಮೋಟರ್‌ ಸ್ಥಗಿತಗೊಳಿಸಿ ನೀರು ಸರಬರಾಜನ್ನು ನಿಲ್ಲಿಸಲಾಯಿತು. ಶುಕ್ರವಾರ ಬೆಳಿಗ್ಗೆ ಸಿಬ್ಬಂದಿ ಕಾಮಗಾರಿ ಆರಂಭಿಸಿ­ದ್ದಾರೆ.

ಇಂದು ನೀರು ಸರಬರಾಜಿಲ್ಲ: ಪೈಪ್‌ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಶನಿವಾರವೂ ನಗರದ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದಿಲ್ಲ ಎಂದು ಹಾಸನ ನಗರಸಭೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.